Saturday, December 6, 2008

ನೀನ್ಯಾರಿಗಾದೆಯೋ ಎಲೆ ಮಾನವ

ಗೋವು ಮಾತನಾಡಿದಾಗ.....

ಆತ್ಮೀಯ,

ಬಹಳ ದಿನಗಳಿಂದ ಈ ಪತ್ರ ಬರೆಯಬೇಕೆಂದಿದ್ದೆ. ಇಂದು ಬರೆಯುತ್ತಿರುವೆ.

ನಾನೇನು ತಪ್ಪು ಮಾಡಿದೆ ನಿನಗೆ? ನಿನ್ನನ್ನು ಎಂದಾದರೂ ದೂಷಿಸಿದ್ದೆನಾ? ಅಥವಾ ನಿನ್ನ ಕುಟುಂಬಕ್ಕೇನಾದರೂ ದ್ರೋಹ ಮಾಡಿದ್ದೆನಾ? ಅಮ್ಮನ ಎದೆ ಹಾಲಿನ ಅನಂತರ ನೀನು ಕುಡಿದಿದ್ದು ನನ್ನ ಹಾಲಲ್ಲವೇ? ಅಂದಿನಿಂದ ಇಂದಿನವರೆಗೆ ನಾನೆಂದೂ ನಿನಗೆ ಮೋಸ ಮಾಡಿಲ್ಲ. ಹಾಗಿದ್ದಾಗ ನನ್ನ ಮೇಲೆ ನಿನಗೇಕೆ ಕೋಪ, ಮತ್ಸರ!

ಹಾಲು ಬೇಕೆಂದಾಗ ಏನು ಮಾಡುತಿದ್ದೆ ನೀನು?
ನನ್ನ ಮುದ್ದು ಕರುವಿಗೆ ನಾನು ಹಾಲುಣಿಸದಂತೆ ಮಾಡಿ ನನ್ನ ಹಾಲನ್ನು ಕರೆದು ನೀನು ನಿನ್ನವರಿಗೆ ಉಣಿಸಿದೆ. “ಅಮ್ಮ ನನಗೆ ಹಾಲು ಬೇಕು, ಕೊಡು” ಅಂತ ಕರು ಸಂಜ್ಞೆ ಮಾಡಿದರೂ ಅದನ್ನು ನೋಡಿ ನಾನು ಅಸಹಾಯಕಳಾಗಿದ್ದೆ. “ಮಗು, ಎಲ್ಲದಕ್ಕೂ ನಾವು ಪಡೆದುಕೊಂಡು ಬರಬೇಕು” ಎಂದು ಕರುವಿಗೆ ಸಮಾಧಾನ ಮಾಡುತ್ತಿದ್ದೆ. ಕೆಚ್ಚಲು ಗಾಯವಾದಾಗ ನಾನು ಒದ್ದಿದ್ದು ನಿಜ. ನನಗೆ ನೋವಾಗುವುದಿಲ್ಲವೇ? ಅದನ್ನೇ ಕಾರಣವಾಗಿಟ್ಟುಕೊಂಡು ನೀನು ನನ್ನ ಕಾಲುಗಳನ್ನು ಕಟ್ಟಿ ಹಾಲು ಕರೆದಿಲ್ಲವೇ? ನನ್ನ ನೋವು ನಿನಗರ್ಥವಾಗಲಿಲ್ಲವೇ?

ಕಂಡ ಕಂಡವರ ಮೇಲೆ ನಿನ್ನ ಕಾಮುಕ ದೃಷ್ಟಿಯಿಟ್ಟ ನೀನು ನನಗೆ ನನ್ನಷ್ಟಕ್ಕೆ ಗರ್ಭಧರಿಸಲೂ ಬಿಡಲಿಲ್ಲ. ನನ್ನ ಪ್ರಾಣಗಳಾದ ನನ್ನ ಕರುಗಳನ್ನು ದುಡ್ಡಿನ ಆಸೆಗೆ ನೀನು ಮಾರಿದೆ. ಸ್ವತಂತ್ರವಾಗಿ ಓಡಾಡುವ ಹಕ್ಕನ್ನೂ ಕಸಿದುಕೊಂಡೆ. ಯಾಕೆ ಕೋಪ ನಿನಗೆ? ಹಾಲು ಕೊಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ನನ್ನನ್ನು ಕಸಾಯಿಖಾನೆಗೆ ತಳ್ಳಿದೆ. ನನ್ನ ಕೋಡು ಉದ್ದವಿತ್ತು, ಅದಕ್ಕೆ ಬೆಂಕಿ ಹಚ್ಚಿ ವೈರಿಗಳ ಮೇಲೆ ಆಕ್ರಮಣ ಮಾಡಲು ನನ್ನನು ಉಪಯೋಗಿಸಿದೆ. ನಿನ್ನ ಭಯದಿಂದ ನಾನು ಹಾಗೆ ಓಡಿದೆ. ಓಡುವಾಗ ಕೊಂಬಿನಲ್ಲಿದ್ದ ಬೆಂಕಿ ನನ್ನ ಮೈಗೂ ತಾಗಿ ಸುಟ್ಟಿತ್ತು. ವೈರಿಗಳು ನನ್ನ ಇರಿದಿದ್ದರು. ನಿನ್ನನ್ನು ಕಾಪಾಡಿಕೊಳ್ಳಲು ನನ್ನನ್ನು ನೀನು ಉಪಯೋಗಿಸಿದ್ದೆ. ನಿನಗೆ ಕರುಣೆಯಿಲ್ಲವೇ?

ನಿನಗಾಗಿ ನನ್ನ ಜೀವನ ತೆತ್ತೆ. ಹೇಳು ಮಾನವ ಹೇಳು.
ನನಗೆ ಉತ್ತರಿಸು. ನಿನ್ನ ಆತ್ಮವನ್ನೊಮ್ಮೆ ಪ್ರಶ್ನಿಸು....
~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"

ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ. ಬರೆಯಲು ಸ್ಪೂರ್ತಿಸಿದ ಮತ್ತು ಆಶೀರ್ವದಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಚಿರಋಣಿ. ಬರವಣಿಗೆಯನ್ನು ತಿದ್ದಿ ತೀಡುತ್ತಿರುವ ಮತ್ತು ಧರ್ಮಭಾರತೀ ಮಾಸಪತ್ರಿಕೆಯಲ್ಲಿ ಲೇಖನ ಬರೆಯಲು ಅವಕಾಶ ನೀಡಿದ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಗದೀಶ ಶರ್ಮಾರವರಿಗೆ ಪ್ರೀತಿಪೂರ್ವಕ ಧನ್ಯವಾದಗಳು.

ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು

4 comments:

shivu.k said...

ಗೋವಿನ ಬಗ್ಗೆ ಇರುವ ನಿಮ್ಮ ಬರಹದಲ್ಲಿ ಎದ್ದು ಕಾಣುತ್ತದೆ. ಗೋವು ಬರೆದ ಪತ್ರ ಮನಕಲಕುವಂತಿದೆ. ಹೀಗೆ ಬರೆಯುತ್ತಿರಿ.

ಆಹಾಂ! ನನ್ನ ಎರಡು ಬ್ಲಾಗುಗಳಲ್ಲೂ ಹೊಸ ಫೋಟೊ ಮತ್ತು ಲೇಖನಗಳಿವೆ. ಬಿಡುವು ಮಾಡಿಕೊಂಡು ಬನ್ನಿ.

ತೇಜಸ್ವಿನಿ ಹೆಗಡೆ said...

ಕಣ್ತುಂಬಿ ಬಂತು! ಕಾಮಧೇನುವಾಗಿರುವ ಗೋವನ್ನು ಹಿಂಸಿಸುವ ಮಾನವ(?) ಯಾರಿಗೂ ಸಲ್ಲದವನೇ ಸರಿ!

ಇದೇ ಶಿರ್ಷಿಕೆಯನ್ನು ಹಾಕಿಕೊಂಡು ನಾನೂ ಲೇಖನವೊಂದನ್ನು ಬ್ಲಾಗ್‌ನಲ್ಲಿ ಹಾಕಿದ್ದೆ. ಆದರೆ ಅದು ಮರಗಳ ಮಾರಣಹೋಮದ ಕುರಿತಾಗಿತ್ತು. ಏನೇ ಆದರೂ ಒಂದೇ ತಾನೇ? ಮಾನವತೆಯ ಸಾವು ಅವ್ಯಾಹತವಾಗಿ ನಡೆಯುತ್ತಿದೆ :(

Harisha - ಹರೀಶ said...

ಒಳ್ಳೆ ಕೆಲಸ ಮಾಡ್ತಾ ಇದ್ದೆ... ಮುಂದುವರೆಸು.. ಈ ನಿನ್ನ ಲೇಖನದ ಬಗ್ಗೆ ನಮ್ಮ ಬ್ಲಾಗಿನಲ್ಲೂ ಹಾಕಿದ್ದಿ...

ಯಜ್ಞೇಶ್ (yajnesh) said...

@ ಶಿವು,
ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು

@ ತೇಜಸ್ವಿನಿ,
ನೀವು ಹೇಳಿದ ಹಾಗೆ ಸ್ವಾರ್ಥಿ ಮಾನವ ಮೂಕ ಪ್ರಾಣಿಗಳನ್ನು ಬಲಿ ಕೊಡೋದು ವಿಪರ್ಯ್ಯಾಸ. ನೀವು ಬರೆದ ಲೇಖನ ಒದ್ತೀನಿ.

@ ಹರೀಶ್,
ನಿಮ್ಮ ಬ್ಲಾಗಿನಲ್ಲಿ ಗೋವಿನ ಲೇಖನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಿಶೇಷ ಧನ್ಯವಾದಗಳು. ನನಗೆ ನೀನ್ಯಾರಿಗಾದೆಯೋ ಎಲೆ ಮಾನವ ಬೇಕಾಗಿತ್ತು. ನಿಮ್ಮ ಬ್ಲಾಗಿನಲ್ಲಿ ಸಿಕ್ತು. ಥ್ಯಾಂಕ್ಸ್.