Saturday, December 11, 2010

ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ - ಇದ್ಯಾಕೆ ಹೀಗೆ ಮಾಡಿದ್ರಿ ಸಾರ್?

ನಮಸ್ತೇ ಸಾರ್,

ಆಫೀಸಿನ ಕೆಲಸದ ನಡುವೆ ನನ್ನ ಗಮನ ಸೆಳೆದಿತ್ತು ಒಂದು ಟ್ವಿಟ್ಟರ್ ಮೆಸೇಜು. ಹೋಗಿ ಎನಾಗಿದೆ ಅಂತ ನೋಡೋದ್ರೊಳಗೆ ಹಲವಾರು ಮೆಸೇಜುಗಳು ಟ್ವಿಟ್ಟರ್, ಫೇಸ್ ಬುಕ್, ಎಸ್.ಎಮ್.ಎಸ್ ಗಳಲ್ಲಿ ಹರಿದಾಡತೊಡಗಿತು. ಭಟ್ಟರು ವಿಜಯಕರ್ನಾಟಕ ಬಿಟ್ಟರಂತೆ!!! ಅನ್ನೋ ಸುದ್ದಿ ಎಲ್ಲೆಡೆ ಹರಡಿತ್ತು. ಎಲ್ಲರಿಗೂ ಶಾಕ್ ಆಗಿತ್ತು. ಮನೆಗೆ ಫೋನಾಯಿಸಿ ಟಿ.ವಿ ನಲ್ಲಿ ಎನಾದ್ರು ಬರ್ತಾಯಿದೆಯೇ ಅಂತ ವಿಚಾರಿಸಿದೆ. ಯಾವ ಟಿವಿ ಯಲ್ಲೂ ಇದರ ಬಗ್ಗೆ ಬರುತ್ತಿರಲಿಲ್ಲ. ಇದು ಸುಳ್ಳುಯಾಗಲಿ ಅಂತ ಮನಸ್ಸು ಹಾರೈಸತೊಡಗಿತು. ಆದರೆ ಅಂತರ್ಜಾಲ ತಾಣಗಳಲ್ಲಿ ನಿರಂತರವಾಗಿ ಹರಿದಾಡತೊಡಗಿತು. ಎನಾದರು ಆಗಲಿ ಅಂತ ವಿಜಯಕರ್ನಾಟಕದಲ್ಲಿ ಇದ್ದ ಗೆಳೆಯನಿಗೆ ಫೋನಾಯಿಸಿದೆ. ಆತ ತುಂಬಾ ಬೇಸರದ ದ್ವನಿಯಲ್ಲಿ ಹೌದು, ಭಟ್ಟರು ರಿಸೈನ್ ಮಾಡಿದ್ರು ಅಂದ. ಆಫೀಸಿನಲ್ಲಿ ಎಲ್ಲರೂ ಗಾಭರಿಯಾಗಿದ್ದಾರೆ ಅಂದ. ನನಗೂ ಮನಸ್ಸಿಗೆ ಬೇಸರವಾಯ್ತು.

ಪತ್ರಿಕೋಧ್ಯಮಕ್ಕೆ ಹೊಸ ರೂಪು ಕೊಟ್ಟವರು ನೀವು. ಪ್ರತಿದಿನ ಬೆಳಗಾದ ತಕ್ಷಣ ನಮ್ಮೆಲ್ಲರ ಗಮನ ಹೋಗ್ತಾಯಿದ್ದಿದ್ದು ವಿಜಯಕರ್ನಾಟಕದ ಮೇಲೆ. ಅದಕ್ಕೆ ಕಾರಣ ನೀವು ಮತ್ತು ನಿಮ್ಮ ಹೊಸ ಶೈಲಿ. ಹಿಂದೆಲ್ಲಾ ಪತ್ರಿಕೆಗೆ ಸಂಪಾದಕ ಎಷ್ಟು ಮುಖ್ಯ ಅನ್ನೋದು ಸಾಮಾನ್ಯ ಜನರಿಗೆ ತಿಳಿದಿರುತ್ತಿರಲಿಲ್ಲ. ಸಂಪಾದಕರ ಹೆಸರುಗಳು ಸಹ ಯಾರಿಗೂ ಗೊತ್ತಿರಲಿಲ್ಲ. ಅದೇ ಹಳೇ ಹೆಡ್ ಲೈನುಗಳು, ಒಂದೇ ರೀತಿಯ ಡಿಸೈನ್ ಗಳು ಇರುತ್ತಿದ್ದವು. ಅದೆಲ್ಲಾ ಹೋಗಿ ಪ್ರತಿದಿನ ಹೊಸತು ಹೊಸತನ್ನು ನೀಡಿದ್ದು ನೀವು. ಪತ್ರಿಕೆಯಲ್ಲಿ ಸಂಪಾದಕರ ಮಹತ್ವವೇನು ಅಂತ ಎಲ್ಲರಿಗೂ ತಿಳಿದಿದ್ದು ನಿಮ್ಮಿಂದ. ಇದು ಮುಖಸ್ತುತಿಯಲ್ಲ. ವಾಸ್ತವ.

ಅದೆಷ್ಟು ಹೊಸತನ್ನು ನೀಡಿದಿರಿ ಸಾರ್ ನೀವು! ಒಂದಾದ ಮೇಲೆ ಇನ್ನೊಂದರಂತೆ ಓದುಗನ ಮನಸ್ಸನ್ನು ಅರಿತು, ಆತನಿಗೆ ಬೋರ್ ಆಗದ ಹಾಗೆ ಕೊಟ್ಟಿರಿ. ಹೊಸ ಪೀಳಿಗೆಯನ್ನು ಸೃಷ್ಟಿಸಿದಿರಿ. ವಿಜಯಕರ್ನಾಟಕದಲ್ಲಿ ಬರೋ ಹೆಡ್ ಲೈನ್ ಓದೋಕೆ ಚೆಂದ. ಇಷ್ಟೆಲ್ಲಾ ಕ್ರಿಯೇಟಿವಿಟಿ ನಿಮ್ಮಲ್ಲಿದೆ! ಇದರೆಲ್ಲದರ ನಡುವೆ ಪ್ರತಿದಿನ ಬರುವ ನಿಮ್ಮ ಸಂಪಾದಕೀಯ, ವಕ್ರತುಂಡೋಕ್ತಿ, ಸ್ಪೂರ್ತಿಸೆಲೆ, ರೂಲ್ ಕಾಲ್ ಗಳು, ಸವ್ಯಸಾಚಿಗಳಾಗಿ, ನೆಚ್ಚಿನ ಅಂಕಣಗಳಾದ ನೂರೆಂಟು ಮಾತು, ಸುದ್ದಿಮನೆ, ಜನಗಳ ಮನ ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಆಗ್ಗಾಗ್ಗೆ ವಿಶೇಷ ವ್ಯಕ್ತಿಗಳನ್ನು ಕರೆಸಿ ಗೌರವ ಸಂಪಾದಕರಾಗಿ ಅವರಿಗೆ ಗೌರವ ಮತ್ತು ನಮಗೆ ಹೊಸತನ್ನು ನೀಡಿದಿರಿ. ಜನರ ನಾಡಿಮಿಡಿತಕ್ಕೆ ತಕ್ಕ ಹಾಗೆ ಬರುತ್ತಿತ್ತು ನಿಮ್ಮ ಅಂಕಣಗಳು. ಅದರಲ್ಲೂ ನೂರೆಂಟು ಮಾತು ಸೂಪರ್. ದಿನಬೆಳಗಾದರೆ ಆ ಹಗರಣ, ಈ ಹಗರಣ ಅಂತ ಕೇಳಿ ಕೇಳಿ ರೋಸಿಹೋಗಿದ್ದ ನಮಗೆ ಎಲ್ಲ ಮರೆಯುವ ಹಾಗೆ ಬರುತ್ತಿತ್ತು ನೂರೆಂಟು ಮಾತುಗಳು. ಹಾರ್ನ್ ಬಿಲ್ ಪಕ್ಷಿ ಬಗ್ಗೆಯಾಗಲಿ ಅಥವಾ ರಿಚರ್ಡ್ ಬ್ರಾಸನ್ ಆಗಲಿ, ಎಲ್ಲವೂ ವಿಶಿಷ್ಟ. ನಿಮ್ಮ ಅಂಕಣಗಳು ಮಿಂಚಂಚೆಯಲ್ಲಿ ಅದೆಷ್ಟು ಬಾರಿ ಹರಿದಾಡಿತ್ತು. ಅದೇನೊ ಸ್ಪೂರ್ತಿ ಆ ಅಂಕಣಗಳನ್ನು ಓದೋವಾಗ ಅದೆಲ್ಲಿಂದೋ ಬರುತ್ತಿತ್ತು.

"ದೇಶ ಸುತ್ತು, ಕೋಶ ಓದು" ಇದನ್ನು ಅಕ್ಷರಶಃ ಪಾಲಿಸುತ್ತಿದ್ದಿರಿ ನೀವು. ನಿಮ್ಮ ನೋಟವೇ ವಿಶೇಷವಾಗಿತ್ತು ಅನ್ಸತ್ತೆ. ಅದಕ್ಕೆ ಅದೆಲ್ಲವೂ ನಿಮ್ಮ ಅಂಕಣಗಳಲ್ಲಿ ಬರುತ್ತಿತ್ತು. ಆಯಾ ದೇಶದ ವಿಶೇಷವೇನು ಅನ್ನೋದನ್ನ ಗಮನಿಸಿ ಎಲ್ಲರಿಗೂ ಇಷ್ಟವಾಗುವ ಹಾಗೆ ಬರೆಯುತ್ತಿದ್ದಿರಿ. ಅದನ್ನು ಓದಿದರೆ ನಾವು ಅಲ್ಲಿ ಹೋಗಿ ಬಂದ ಹಾಗಾಗುತ್ತಿತ್ತು. ಪ್ರಯಾಣದ ಸಮಯದಲ್ಲಿ ನೀವು ಬಹಳಷ್ಟು ಪುಸ್ತಕಗಳನ್ನು ಓದುತ್ತಿರುತ್ತೀರಿ ಅಂತ ಕೇಳಿದ್ದೆ. ಅತ್ಯಂಕ ಕಡಿಮೆ ಅವಧಿಯಲ್ಲಿ ನಲವತ್ತೈದು ಪುಸ್ತಕಗಳನು ಬರೆದಿರಿ. ಬಂದ ಪುಸ್ತಕಗಳೆಲ್ಲಾ ಹಾಟ್ ಸೇಲ್ ಆಗುತ್ತಿದ್ದವು. ಬಹಳಷ್ಟು ಬಾರಿ ಪುಸ್ತಕದಂಗಡಿಯಲ್ಲಿ ಬಂದ ತಕ್ಷಣ ಖಾಲಿಯಾಗಿರುತ್ತಿದ್ದವು.

ನೀರು ಒಂದೆಡೆ ನಿಲ್ಲಬಾರದಂತೆ, ಹರಿಯುತ್ತಾ ಇರಬೇಕಂತೆ, ಬಹುಷಃ ನೀವು ನಿಂತ ನೀರಾಗಲು ಇಷ್ಟವಿಲ್ಲದೇ ಹೊಸತನ್ನು ಹುಡುಕಿಕೊಂಡು ಹೊರಟಿರಬೇಕು. ಅಲ್ಲಿ ಹೋಗ್ತಾರಂತೆ, ಇಲ್ಲಿ ಹೋಗ್ತಾರಂತೆ, ಹಾಗಂತೆ, ಹೀಗಂತೆ ಅಂತ ಕಟ್ಟು ಕಥೆ ಸೃಷ್ಟಿಸುತ್ತಿರುವವರ ಬಗ್ಗೆ ನೋಡಿದರೆ/ಕೇಳಿದರೆ ಹೇಸಿಗೆಯಾಗುತ್ತದೆ. ನೀವಿಲ್ಲದ ವಿಜಯ ಕರ್ನಾಟಕ ಓದಲು ಮನಸ್ಸಾಗುತ್ತಿಲ್ಲ. ಪ್ರತಿದಿನ ಬೆಳ್ಳಂಬೆಳಗ್ಗೆ ಆಫೀಸಿಗೆ ಬಂದು ಮೊದಲು ಮಾಡುತ್ತಿದ್ದ ಕೆಲಸ ವಿಜಯಕರ್ನಾಟಕ ಈ-ಪೇಪರ್ ಓದೋದು. ಇವತ್ತೂ ಓದಿದೆ. ಯಾಕೋ ಬೋರ್ ಅಂತ ಅನಿಸಿತು. ಒಂದು ಚಿತ್ರ ನಟಿ ಸೀರೆ ಉಟ್ಟರೂ ಅದನ್ನು ಬ್ರೇಕಿಂಗ್ ನ್ಯೂಸ್ ಅಂತ ಹಾಕೋ ಮಾಧ್ಯಮಗಳು, ಟಿವಿ ನವರು ನೀವು ವಿಜಯಕರ್ನಾಟಕದಿಂದ ಹೊರನಡೆದಿದ್ದರ ಬಗ್ಗೆ ಹಾಕಲಿಲ್ಲ. ಪತ್ರಿಕೆಯಲ್ಲಿರುವ/ದೃಶ್ಯ ಮಾಧ್ಯಮದಲ್ಲಿರುವ ಸುದ್ದಿಗಳ ಬಗ್ಗೆ ಅದೇ ವೃತ್ತಿಯಲ್ಲಿರುವವರು ಹಾಕೊಲ್ಲ ಅಂತ ಆತ್ಮೀಯರೊಬ್ಬರು ಹೇಳಿದರು. ಆದರೂ ತಡರಾತ್ರಿಯವರೆಗೆ ಎಲ್ಲಾ ಟಿ.ವಿ ನೋಡಿದೆ. ಬೆಳಗ್ಗೆ ವಿಜಯಕರ್ನಾಟಕ ಓದಿದ್ದೆ. ಎಲ್ಲಿಯೂ ಸುದ್ದಿಯಿರಲಿಲ್ಲ. ಮನಸ್ಸಿಗೆ ಬೇಸರವಾಯ್ತು.

ನಾವೆಲ್ಲಾ ನಿಮ್ಮ ಜೊತೆಯಿದ್ದೇವೆ. ನೀವೇನೇ ಮಾಡಿದ್ರು ಅದು ಹೊಸತಾಗಿರತ್ತೆ. ನಮಗೆಲ್ಲಾ ಇಷ್ಟವಾಗುತ್ತದ್ದೆ. ನೀವೀಗ ಸ್ವತಂತ್ರರು. ಮೊದಲಿನ ಹಾಗಲ್ಲ. ನಿಮ್ಮಲ್ಲಿರೂ ಶಕ್ತಿ ಹೊರಬರಲಿ. ಸಾದ್ಯವಾದರೆ ಅದು ಅಂತರ್ಜಾಲದಲ್ಲಿ ಶೀಘ್ರವಾಗಿ ಬರಲಿ.

Thursday, December 9, 2010

ಅಜಗಜಾಂತರ

ಅಕಸ್ಮಾತ್ Ladies ಏನಾದ್ರು Gents Rest Room ಗೆ ಹೋದ್ರೆ ಆಕಸ್ಮಿಕ!!!
ಅದೇ ಅಕಸ್ಮಾತ್ Gents ಏನಾದ್ರು Ladies Rest Room ಗೆ ಹೋದ್ರೆ ......???

Friday, December 3, 2010

ಎಲ್ಲೋ ಯೋಚನೆ ಮಾಡ್ತಾ, ಏನೋ ಮಾಡಿದ್ರೆ

"ಟಕ್. ಟಕ್. ಟಕ್" ಶಬ್ದ ಜೋರಾಗಿ ಒಮ್ಮೆಲೆ ರೂಮಿನ ಬಾಗಿಲು ತೆಗೆದುಕೊಂಡಿತು.

"Oh Shit, I am so sorry" ಒಳಗೆ ಬಂದ ತಕ್ಷಣ ಆಕೆ ಹೇಳಿದ್ದಳು. ಎಲ್ಲರ ಗಮನ ಬಾಗಿಲ ಕಡೆ ಹೋಯ್ತು.. ಎಲ್ಲರಿಗೂ ಒಮ್ಮೆ ಗಾಭರಿ ಮತ್ತು ಹೆದರಿಕೆಯಾಯ್ತು. ಅಷ್ಟು ಹೇಳಿದವಳೇ ಬುಡು ಬುಡು ಅಂತ ಹೋದಳು, ಒಳಗಿದ್ದವರೆಲ್ಲಾ ಆಕೆ ಹೋದ ಮೇಲೆ ಕಿಸ ಕಿಸ ಅಂತ ನಕ್ಕರು.

ಯಾವುದೋ ಟೆನ್ಸನ್ ನಲ್ಲಿ ಪಕ್ಕದ ರೂಮಿಗೆ ಆಕೆ ಹೋಗಬೇಕಾಗಿತ್ತು. ಅದರ ಬದಲು ಈ ರೂಮಿಗೆ ಬಂದಿದ್ದಳು. ಅದು Gents Rest room ಆಗಿತ್ತು. ನಮ್ಮ ಆಫೀಸಿನಲ್ಲಿ ಆದ ಘಟನೆ.

ಕೆಲವೊಮ್ಮೆ ಎಲ್ಲೋ ಯೋಚನೆ ಮಾಡ್ತಾ, ಏನೋ ಮಾಡಿದ್ರೆ ಆಗೋದು ಹೀಗೆ.

Saturday, November 6, 2010

ಹಬ್ಬ ಹಬ್ಬ ಮಲ್ಲಣ್ಣ, ಇಬ್ಬರಿಗೊಂದ್ ಹೋಳಿಗೆ. ಹಬ್ಬದ ಮರ್ದಿನ ರಾಗಿ ರಬ್ಬಳಿಗೆ

"ಬೇಗ ಏಳು, ಎದ್ದು ಸ್ನಾನ ಮಾಡು. ಅಪ್ಪ ಆಗ್ಲೇ ಪೂಜೆ ಶುರು ಮಾಡಿದ್ದ. ಗೋ ಪೂಜೆ ಮಾಡಕು, ಆಮೇಲೆ ಅಜ್ಜನ ಮನೆಗೆ ಹೋಗಕು" ಅಮ್ಮ ಕರೆದಾಗ ಯಾವಾಗ್ಲು ತಡವಾಗಿ ಏಳ್ತಾಯಿದ್ದ ನಾನು ಇಂದು ಮಾತ್ರ ದಿಗ್ಗನೆ ಎದ್ದಿದ್ದೆ. ಎದ್ದು ಬಡ ಬಡ ಸ್ನಾನ ಮಾಡೋದ್ರೊಳಗೆ ಅಪ್ಪ ಗೋಪೂಜೆ ಮಾಡೋಕೆ ಕೊಟ್ಟಿಗೆಗೆ ಬಂದಿದ್ದ. ನಾನು ಗೌತಮ ಮತ್ತು ಚಂಪ ಎಲ್ಲ ದನಕರುಗಳನ್ನು ನೋಡಿದ್ವಿ. ಎಲ್ಲ ಸಡಗರದಿಂದ ನಮ್ಮನ್ನು ನೋಡ್ತಾಯಿದ್ವು. ಅಬ್ಬಾ... ಈ ಸಲ ಚೆಂಡು ಹೂವಿನ ಬರಗಾಲ ನೋಡಿ. ನಮ್ಮ ಮನೇಲಿ ಇದ್ದ ಚೆಂಡು ಹೂವು ಸಾಕಾಗೊಲ್ಲ ಅಂತ ಹಿಂನ್ಸೋಡಿಗೆ ಹೋಗಿ ಕೊಯ್ಕೊಂಡು ಬಂದಿದ್ವಿ. ತಂದು ಸಂಜೆ ಎಲ್ಲಾ ಸುರಿದು ಹಾರ ಮಾಡಿ ಅದನ್ನು ನೇತು ಹಾಕಿದ್ವಿ. ಇದು ಗಂಗೆಗೆ, ಇದು ಗಂಗೆ ಮಗ್ಳಿಗೆ, ಇದು ಶುಂಟಿ ಎಮ್ಮೆಗೆ ಹೀಗೆ ಸಾಗಿತ್ತು ನಮ್ಮ ಹಾರದ ವಿಂಗಡಣೆ. ಬೆಳಿಗ್ಗೆ ಪೂಜೆ ಸಮಯದಲ್ಲಿ ಅದಲ್ಲೆ ದನಕರುಗಳ ಮುಡಿಲನ್ನೇರಿತ್ತು. ಗಂಗೆಗೆ ಈ ಸಲದ ಪೂಜೆ. ಅಪ್ಪ ಪೂಜೆ ಮಾಡ್ತಾಯಿದ್ರೆ ಗಂಗೆ ಆ ಕಡೆ ಈ ಕಡೆ ಮುಖ ಅಲ್ಲಾಡಿಸುತ್ತಾಯಿತ್ತು. ಅಮ್ಮ ಕುಂಕುಮ ಹಚ್ಚೋಕೆ ಹರಸಾಹಸ ಮಾಡಿದ್ಲು. ನಾನಂತು ನನ್ನ ಹೊಸ ಬಟ್ಟೆ ಗಲೀಜಾದರೆ ಕಷ್ಟ ಅಂತ ದೂರ ನಿಂತಿದ್ದೆ. ಅಮ್ಮ ಎಲ್ಲ ದನಕರು, ಎಮ್ಮೆಗಳಿಗೆ ಕುಂಕುಮ ಹಚಿದ್ಲು. ಮನೆ ಕೆಲಸದಾಳು ವಾಸು ಹೊಸ ಬಟ್ಟೆ ಹಾಕ್ಕೊಂಡು ಬಂದಿದ್ದ. ಅಪ್ಪ, ಅಮ್ಮ ಮತ್ತು ವಾಸು ಎಲ್ಲಾ ಗೋವುಗಳಿಗೆ ಹಾರ ಕಟ್ಟಿದ್ದರು. ಎಲ್ಲ ಮನೆಯವರಿಗಿಂತ ನಮ್ಮ ಮನೇಲಿ ಗೋಪೂಜೆ ಬೇಗ ಆಗಿತ್ತು.

"ಮನ್ಯಾಥ.. ಕು ಹೂ.. ವಿದ್ಯಾ ಕು ಹೂ" ಅಂತ ಅಮ್ಮ ಜೋರಾಗಿ ಪಕ್ಕದಮನೆ ಮಂಜುನಾಥಣ್ನನ್ನ ಕರೆದಿದ್ಲು. ಪಕ್ಕದ ಮನೇ ಅಂದ್ರೆ ಸುಮಾರು ದೂದ ಇತ್ತು. ಪಟ್ಟಣದ ತರ ಅಕ್ಕ ಪಕ್ಕ ಇಲ್ಲ. ನಮ್ಮ ಮನೆ ಒಂದು ಗುಡ್ಡದ ಮೇಲಿದ್ದರೆ ಪಕ್ಕದ ಮನೆ ಇನ್ನೊಂದು ಗುಡ್ಡದ ಮೇಲೆ. "ಗೋಪೂಜೆ ಮುಗತ್ತಾ? ಗೋವು ಬಿಡದಾ?" ಅಂತ ಅಮ್ಮ ಕೂಗಿ ಕೇಳ್ದಾಗ ವಿದ್ಯಕ್ಕ "ಐದ್ ನಿಮ್ಷ. ಇವು ಪೂಜೆ ಮಾಡ್ತಾಯಿದ್ದ" ಅಂತ ಕೂಗಿದ್ದಳು. ಅಪ್ಪ "ಅಚೇಮನೆ ಸುಬ್ಬಣ್ಣ ಯವಾಗ್ಲು ಲೇಟು. ಈ ಸಲನಾದ್ರು ಬೇಗ ಏಳ್ಲಾಗಿತ್ತು" ಅಂತ ಗೊಣಗುಟ್ಟಿದ್ದ. ಅಮ್ಮ ಅದ್ಕೆ "ಅವು ನಿಮ್ಮಂಗೆ ಗಡಿಬಿಡಿ ಮಾಡ್ತ್ವಲ್ಲೆ. ನಿದಾನ ಮಾಡ್ತ" ಅಂದಿದ್ಲು. ನಮ್ಗೂ ಆದಷ್ಟು ಬೇಗ ಮುಗ್ಸಿ ಅಜ್ಜನ ಮನೆಗೆ ಹೋಗೋ ತವಕ. ಐದು ನಿಮಿಷದಲ್ಲಿ ಮನ್ಯಾಥಣ್ಣ ರೆಡಿ ಅಂತ ಕೂಗಿದ್ದ. ನಮ್ಮ ಮನೆಯಿಂದ ಗೋವುಗಳೆಲ್ಲ ಹೊರಟಿದ್ವು. ಎಂದಿನಂತೆ ಇಂದು ಬ್ಯಾಣದ ಕಡೆ ಹೋಗದೆ ಊರ ಕಡೆ ಹೋಗಬೇಕಿತ್ತು. ಅಭ್ಯಾಸ ಬಲದಂತೆ ಮೇಲೆ ಹೋದರೆ ಕಷ್ಟ ಅಂತ ವಾಸು ಮೇಲ್ಗಡೆ ನಿಂತಿದ್ದ. ಅಪ್ಪ ಅಮ್ಮ ಗೋವನ್ನು ಬಿಟ್ಟಿದ್ದರು. ನಾವೆಲ್ಲ ಗೋವಿನ ಹಿಂದೆ ಹೆಜ್ಜೆ ಹಾಕಿದ್ವಿ. ಸ್ವಲ್ಪ ದೂರ ಹೋದ್ಮೇಲೆ ಮನ್ಯಾಥಣ್ಣನ ಮನೆ ಗೋವುಗಳೆಲ್ಲ ಸೇರಿದ್ವು. ಯಥಾಪ್ರಕಾರ ಸುಬ್ಬಣ್ಣ ಲೇಟು. ಏಷ್ಟ್ ಸಲ ಹೇಳಿದ್ರು ಅಷ್ಟೇ ಅಂತ ಅಪ್ಪ ಮತ್ತು ಮನ್ಯಾಥಣ್ಣ ಮಾತಾಡ್ಕೊಂಡ್ರು. ಮನ್ಯಾಥಣ್ಣನ ಅಮ್ಮ ಭಾಗೀರಥಕ್ಕ "ಎನ್ರೋ.. ಅಪ್ಪ ಹೊಸ ಬಟ್ಟೆ ತಂದ್ನಾ" ಅಂತ ನಮ್ಮನ್ನು ಕೇಳಿದ್ಲು. ನಾವೆಲ್ಲ ಫುಲ್ ಖುಷಿನಲ್ಲಿದ್ವಿ. ಅಂತೂ ಇಂತು ಸುಬ್ಬಣ್ಣ ಮನೆ ಗೋವೆಲ್ಲ ಹೊರಟ್ವು. ಈಶಜ್ಜನ ಮನೆ ಎತ್ತಿಗೆ ಈ ಸಲ ಭಾರೀ ಅಲಂಕಾರ. ಕೋಡು ತುಂಬೆಲ್ಲಾ ಹೂವು. ಹಿಂನ್ಸೋಡಿ ರವಿಯಣ್ಣ ಸಿಂಗಾರ ಮಾಡಿದ್ದ. ಎಲ್ಲಾ ಗುಡ್ಡಕ್ಕೆ ಹೋದ್ವಿ. ಅಲ್ಲಿ ದೇವ್ರಿಗೆ ಕಾಯಿ ಒಡೆದು ಗೋವನ್ನೆಲ್ಲಾ ಮೇಯಲು ಬಿಟ್ಟಿದ್ರು.

ಊರ ಯುವಕರಿಗೆಲ್ಲಾ ಗೊವಿನ ಮೇಲಿದ್ದ ಸರ ಕೀಳೋದು ಒಂದು ಚಟ. ಅದು ಯಾಕಾಗಿ ಬಂತೋ ಗೊತ್ತಿಲ್ಲ. ತಮ್ಮ ಸಾಮರ್ಥ್ಯ ತೋರಿಸ್ಕೋಬೇಕು ಅಂತಾನೋ ತಿಳಿದಿಲ್ಲ. ಸಿಂಗಾರಗೊಂಡ ಗೋವನ್ನು ಬೆರಿಸಿಕೊಂಡು ಹೋಗಿ, ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು ಬರಬೇಕು. ಎಷ್ಟೋ ಜನ ಸಗಣಿ ಮೇಲೆ ಬಿದ್ದು ಮೈಯೆಲ್ಲಾ ಕೊಳಕು ಮಾಡಿಕೊಂಡು ಬರಿಗೈನಲ್ಲಿ ಬಂದ್ರೆ ಇನ್ನು ಕೆಲವರು ಒಂದಿಷ್ಟು ಸರ ತರುತ್ತಿದ್ದರು. ನಾನಂತು ಇದರ ಉಸಾಬರಿ ಬೇಡ ಅಂತ ಹೋಗ್ತಾನೇ ಇರ್ಲಿಲ್ಲ. ಗೌತಮನಂತೂ ಚಾಲೆಂಜ್ ಹಾಕಿ ಓಡಿಹೋಗಿ ಒಂದಿಷ್ಟು ಸರ ಕಿತ್ತುಕೊಂಡು ಬರ್ತಾಯಿದ್ದ. ಊರ ಎಲ್ಲರೂ ಗುಡ್ಡದ ಮೇಲೆ ಕುಳಿತು, ಹೆಂಗಸರು ತಂದು ಅವಲಕ್ಕಿ, ಕಾಯಿತುರಿ ಎಲ್ಲಾ ಕುತ್ಗೊಂಡು ತಿಂತಾಯಿದ್ರು. ಒಂದಿಷ್ಟು ಹರಟೆ ನಡಿತಾಯಿತ್ತು. ಎಲ್ಲರೂ ಹಬ್ಬಕ್ಕೆ ನಮ್ಮ ಮನೆಗೆ ಬನ್ನಿ ಅಂತ ಕರಿತಾಯಿದ್ರು. ನಮ್ಗೆ ಇಲ್ಲಿ ಹಬ್ಬ ಮುಗಿದಿದ್ದೇ ತಡ ಸೀದಾ ಅಜ್ಜನ ಮನೆಗೆ ಓಡ್ತಾಯಿದ್ವಿ. ಅಣ್ಣ, ಭಾವಯ್ಯ, ಕೃಪೇಶ್ ಭಾವಯ್ಯ, ಗೋಪ್ಲ್ಯಾ, ಅತ್ತೆ ಮತ್ತು ಮಾವರನ್ನು ನೋಡೋಕೆ ಆದಷ್ಟು ಬೇಗ ಹೋಗ್ಬೇಕು ಅನ್ನೋದೆ ನಮ್ಮ ಗುರಿ. ಮತ್ತುಳಿದವರೆಲ್ಲ ಯಾವಾಗ್ಲು ಸಿಗಾರೆ. ಆದ್ರೆ ಇವ್ರೆಲ್ಲಾ ಸಿಗೋದು ಅಪರೂಪ. ಅಜ್ಜನ ಊರಿನ ಪರಮೇಶಣ್ಣ ನ ಮನೆಯಲ್ಲಿ ಗೋಪೂಜೆ ಸ್ವಲ್ಪ ಲೇಟು. ಹಾಗಾಗಿ ನಮಗೆ ನಮ್ಮ ಮನೆ ಮತ್ತು ಅಜ್ಜನ ಮನೆ ಗೋಪೂಜೆ ಎರಡು ಸಿಗ್ತಾಯಿತ್ತು.

ಎಂದಿನಂತೆ ಅಜ್ಜನ ಮನೆಯಲ್ಲಿ ಗೋವು ಪೂಜೆ ಮುಗಿಯುವ ಹಂತಕ್ಕೆ ಬಂದಿತ್ತು. ನಾವು ಫುಲ್ ಹೆಮ್ಮೆಯಿಂದ ನಮ್ಮೂರಲ್ಲಿ ಗೋಪೂಜೆ ಮುಗಿದು ಸುಮಾರು ಹೊತ್ತು ಆತು. ನಿಮ್ಮೂರಲ್ಲಿ ಯಾವಾಗ್ಲು ಲೇಟು ಅಂತ ನಗಾಡ್ತಯಿದ್ವಿ. ನಾವು ಹೋದ ಸ್ವಲ್ಪ ಹೊತ್ತಿಗೆ ಅಜ್ಜನ ಮನೆಯಿಂದ ಗೋವುಗಳು ಹೊರಟವು. ಶೇಷಗಿರಿಯಣ್ಣನ ಮನೆ ಹತ್ರ ಊರ ಎಲ್ಲರ ಮನೆಯ ಗೋವುಗಳು ಬಂದವು. ಎಲ್ಲಾ ಸೇರಿ ಗುಡ್ಡದ ಕಡೆ ಹೊರಟೆವು. ಅಲ್ಲಿ ಎಲ್ಲ ತಂದಿದ್ದ ಅವಲಕ್ಕಿ, ಅರಳಿಗೆ ಕಾಯಿ ತುರಿದು ಬೆಲ್ಲ ಸೇರಿಸಿ ಬಾಳೆ ಎಲೆಯಲ್ಲಿ ತಿನ್ನೋಕೆ ಏನು ಖುಷಿ ಗೊತ್ತಾ. ಅಲ್ಲಿ ಮತ್ತೆ ಹರಟೆ ನಂತರ ಅಜ್ಜನ ಮನೆಯತ್ತ ನಮ್ಮ ಪಯಣ. ಅಲ್ಲಿ ಎಲ್ಲರ ಜೊತೆ ಕುಳಿತು ಹಾಲುಂಡೆ ಪಾಯಸಕ್ಕೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿದ್ವಿ. ಇವ ಮಾಡಿದ ಉಂಡೆ ದೊಡ್ಡಕಿದ್ದು, ಇವ ಮಾಡಿದ್ದು ಸಣ್ನ ಅನ್ನೋ ತಮಾಷೆಯಲ್ಲಿ ಸಮಯ ಹೋಗಿದ್ದೆ ಗೊತ್ತಾಗ್ತ್ಲಿರಲಿಲ್ಲ. ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ ಮಾತನಾಡುವ ಹೊತ್ತಿಗೆ ಊಟ ಸಿದ್ದವಾಗುತ್ತಿತ್ತು. ಸಂಜೆಯ ತನಕ ಅಲ್ಲೇ ಇದ್ದು ಮನೆಗೆ ವಾಪಾಸಾದ್ವಿ. ಮನೆಗೆ ಬರೋಕೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಮನೆಗೆ ಬಂದರೆ ಮತ್ತೆ ನಾವು ಮೂವರು. ಅಲ್ಲಾದರೆ ಎಷ್ಟು ಜನ ಇದ್ರು. ನಾಳೆ ನಮ್ಮ ಮನೆ ಹಬ್ಬಕ್ಕೆ ಎಲ್ಲಾ ಬರ್ತಾರೆ ಅಂತ ಅಪ್ಪ ಅಮ್ಮ ನಮ್ಮನ್ನು ಪುಸಲಾಯಿಸಿ ಕರ್ಕೊಂಡು ಹೋಗ್ತಾಯಿದ್ರು. ಮನೆಗೆ ಬಂದು ಹಬ್ಬ ಕಳಿಸಲು ಅಪ್ಪ ಹೋಗುತ್ತಿದ್ದ. ಅಪ್ಪನ ಜೊತೆ ನಾವು ಹಿಂದೆ. "ಹಬ್ಬ ಹಬ್ಬ ಮಲ್ಲಣ್ಣ, ಇಬ್ಬರಿಗೊಂದ್ ಹೋಳಿಗೆ. ಹಬ್ಬದ ಮರ್ದಿನ ರಾಗಿ ರಬ್ಬಳಿಗೆ" ಅಂತ ಅಪ್ಪ ಹೇಳ್ತಾಯಿದ್ರೆ ನಾವು ದ್ವನಿಗೂಡಿಸ್ತಾಯಿದ್ವಿ. ಹಬ್ಬ ಕಳೆದು ಹೋಗಿದ್ದೆ ಗೊತ್ತಾಗ್ತಾಯಿರಲಿಲ್ಲ. ಪ್ರತಿ ದಿನ ಈ ರೀತಿ ಹಬ್ಬ ಇದ್ದಿದ್ರೆ ಎಷ್ಟು ಚೆಂದ ಅನಿಸ್ತಾಯಿತ್ತು.

"ಏಳ್ರಿ, ಸ್ನಾನಕ್ಕೆ ಹೋಗಿ, ಘಂಟೆ ಹನ್ನೊಂದಾಯ್ತು" ಅಂತ ಹೆಂಡ್ತಿ ಕರೆದಾಗಲೇ ನಾನು ಮತ್ತೆ ವಾಪಾಸಾಗಿದ್ದು. ಅಲ್ಲಿಯತನಕ ನನ್ನ ಮನಸ್ಸು ಸುಮಾರು ಹದಿನೈದು ಇಪ್ಪತ್ತು ವರ್ಷದ ಹಿಂದೆ ಆಚರಿಸುತ್ತಿದ್ದ ಹಬ್ಬಕ್ಕೆ ನಾನು ಹೋಗಿತ್ತು. ವಾಸ್ತವಕ್ಕೆ ಬಂದ ಮೇಲೆ ಹಿಂದೆ ಮತ್ತು ಇಂದು ನೆನೆದಾಗ ಮನ್ಸು ಬೇಸರವಾಗಿತ್ತು. ಸುಮ್ನೆ ಒಮ್ಮೆ ಟಿ.ವಿ ಹಾಕಿದೆ. ಒಂದು ಚಾನಲ್ ನಲ್ಲಿ ಫಿಲ್ಮ್ ನಲ್ಲಿ ಬರೋ ಹೀರೋಗಳ (ಆದ್ರೆ ಬಹಳಷ್ಟು ಜನ ಇವ್ರೇ ನಿಜವಾದ ಹೀರೋಗಳು ಅಂತ ಮಾಡ್ಕೊಂಡಿರ್ತಾರೆ) ಇಂಟರ್ವ್ಯೂ ಬರ್ತಾಯಿತ್ತು. ಇನ್ನೊಂದ್ರಲ್ಲಿ ಅಡುಗೆ ಪ್ರೋಗ್ರಾಮ್. ಸ್ವಲ್ಪ ಹಕ್ಕಿ(ಅಕ್ಕಿ) ಹಾಕಿ, ಆಮೇಲೆ ಕೊತ್ತಮಿರಿ (ಕೊತ್ತಂಬರಿ), ಆಮೇಲೆ ಹಿಂಗ್ (ಇಂಗು) ಹಾಕಿ ಅಂತ ಹೇಳ್ಯಾಯಿದ್ರು. ಈ ಸಲ ಇವ್ರಿಗೆ ರಾಜ್ಯೋಸ್ತವ (ಹೆಚ್ನವ್ರು ಹೀಗೆ ಹೇಳೋದು) ಪ್ರಶಸ್ತಿ ಕೊಡಬೇಕಿತ್ತು.

ಚಿಕ್ಕವನಿದ್ದಾಗ ಆಚರಿಸುತ್ತಿದ್ದ ಹಬ್ಬ ಮತ್ತು ಇಂದಿನ ಹಬ್ಬ ನೆನೆದಾಗ ಯಾಕೋ ನೋವಾಯ್ತು. ಎತ್ತಣ ಮಾಮರ, ಎತ್ತಣ ಕೋಗಿಲೆ.

ದೀಪಾವಳಿಯ ಶುಭಾಶಯಗಳು. ಮನದ ಕತ್ತಲೆ ಕಳೆದು ಬೆಳಕು ಬರಲಿ.

Thursday, October 28, 2010

ಮಳೇ ನೀರೇ ಹಾಗೆ

ಸುಮಾರು ಬೆಳಗ್ಗೆ ೮ ರ ಆಜುಬಾಜು. ಬೋರ್ಗೆರೆಯುವ ಮಳೆಯಲ್ಲಿ ದೇವೇಗೌಡ ಪೆಟ್ರೋಲ್ ಬಂಕ್ ಕಡೆ ಸಾಗುತ್ತಿತ್ತು ನನ್ನ ಕಾರು. ವೈಫರ್ ಯಥಾನುಶಕ್ತಿ ಸ್ಪೀಡ್ ನಲ್ಲಿ ಗಿರ್ ಅಂತ ತಿರುಗ್ತಾಯಿತ್ತು. ನಾಲ್ಕು ಅಡಿ ಮುಂದೆ ಏನಿದೆ ಅಂತ ಕಾಣಿಸುತ್ತಿರಲಿಲ್ಲ. ಸದ್ಯ ಟೂ ವೀಲರ್ಸ್ ಕಾಟ ಇರಲಿಲ್ಲ. ನಿಧಾನವಾಗಿ ಹೋಗ್ತಾಯಿದ್ದೆ. ಇನ್ನೇನು ದೇವೇಗೌಡ ಪೆಟ್ರೋಲ್ ಬಂಕ್ ಹತ್ರ ಬಂದ ತಕ್ಷಣ ಸಿಗ್ನಲ್ ನೋಡಿದೆ. ಗ್ರೀನ್ ಇತ್ತು. ಹಾಗೆ ಸ್ವಲ್ಪ ಮುಂದೆ ಬಂದ ತಕ್ಷಣ ಯೆಲ್ಲೋ ಸಿಗ್ನಲ್ ಬಂತು. ನಿಧಾನ ಮಾಡಿದರೆ ಸರ್ಕಲ್ ಮದ್ಯದಲ್ಲೆ ರೆಡ್ ಸಿಗ್ನಲ್ ಬರತ್ತೆ. ಸಿಗ್ನಲ್ ಜಂಪ್ ಮಾಡಿದ್ರೆ ಸುಮ್ನೆ ತಾಪತ್ರಯ. ಸ್ವಲ್ಪ ಜೋರಾಗಿ ಸರ್ಕಲ್ ಕ್ರಾಸ್ ಮಾಡೋಣ ಅಂತ ಆಕ್ಸಿಲೆಟರ್ ಒತ್ತಿದೆ.

ನಲವತ್ತರ ಸ್ಪೀಡ್ ನಲ್ಲಿ ಇದ್ದ ಕಾರು ಒಮ್ಮೆಲೆ ದೇವರು ಮೈಮೇಲೆ ಬಂದಂತೆ ಜೋರಾಗೀ ಹೋಂಕರಿಸುತ್ತಾ ಹೊರಡ್ತು. ಸುಯ್ಯ್ ಅಂತ ಹೊರಟ ನನಗೆ ಸ್ವಲ್ಪ ಮುಂದೆ ಹೋಗುತ್ತಿದ್ದ ಆಟೋ ಕಣ್ಣಿಗೆ ಕಾಣಿಸ್ಲಿಲ್ಲ. ಪಾಪ ಆಟೋ ಡ್ರೈವರ್ ಗ್ರಹಚಾರ, ಆಟೋ ದಾಟೀ ಹೋಗೋವಾಗ ಮದ್ಯೆ ಇದ್ದ ಒಂದು ಸಣ್ಣ ಹೊಂಡದ ಆಳವನ್ನು ಪರೀಕ್ಷೆ ಮಾಡಿತ್ತು ಕಾರಿನ ಎಡಬಾಗದ ಟೈರುಗಳು. ದೊಪ್ಪಂತೆ ಆಟೋ ಮೇಲೇ ನೀರು ಬಿತ್ತು. ಏನಾಗತ್ತೆ ಅಂತ ನೋಡೋದ್ರೊಳಗೆ ಆಟೋ ಡ್ರವರ್ ಮತ್ತು ಹಿಂದೆ ಕುಳಿತಿದ್ದವರು ಸಂಪೂರ್ಣ ತೋಯ್ದಿದ್ದರು. ತಕ್ಷಣ ವಾರೆಗಣ್ಣಿಂದ ಆಟೋ ನೋಡಿದೆ. ಏಕಾಏಕಿ ದೊಡ್ಡ ಟ್ಯಾಂಕಿನ ನೀರು ಡ್ರೈವರ್ ಮೇಲೆ ಬಿದ್ದಿತ್ತು. ಹಿಂದೆ ಕುಳಿತಿದ್ದವರು ತೋಯ್ದಿದ್ದರು. ಡ್ರೈವರ್ ರಕ್ತ ಕೊತ ಕೊತ ಕುದಿತಾಯಿತ್ತು ಅನ್ಸತ್ತೆ. ಬಿದ್ದ ನೀರು ತಕ್ಷಣ ಆವಿಯಾಗುತ್ತಿತ್ತು. ಬಿಸಿಯಾದ ದೋಸೆ ಕಾವಲಿಗೆ ನೀರು ಹಾಕಿದಾಗ ಸುಯ್ಯ್ ಅಂತ ಶಬ್ದ ಮಾಡುತ್ತಾ ಆವಿಯಾಗುತ್ತದೆಯಲ್ಲ ಹಾಗೆ ಡ್ರೈವರ್ ಮೇಲೆ ಬಿದ್ದ ನೀರು ಆವಿಯಾಯ್ತು ಅನ್ಸತ್ತೆ. ಸದ್ಯ ಮಳೆ ಜೋರಾಗಿದ್ದರಿಂದ ಮತ್ತು ಕಾರಿನ ಗ್ಲಾಸುಗಳು ಮುಚ್ಚಿದ್ದರಿಂದ ನನಗೆ ಶಬ್ದ ಗೊತ್ತಾಗಲಿಲ್ಲ. ಆದರೆ ಡ್ರೈವರ್ ನ ರೌದ್ರಾವತಾರದ ದರ್ಶನವಾಯ್ತು. ಅಯ್ಯೋ, ಏನಪ್ಪ ಮಾಡ್ಲಿ ಈಗ ಅಂತೆ ಪೇಚಾಡಿದೆ. ಇನ್ನೂ ಸ್ಪೀಡಾಗಿ ರೈಟ್ ಗೆ ತಗೊಂಡು ಬಸ್ ನ ಓವರ್ ಟೇಕ್ ಮಾಡಿ ಮುಂದೆ ಹೋದೇ. ಯೋ.. ಯೋ... ಅಂತ ಕಿರುಚುತ್ತಾ ಆಟೋ ಡ್ರೈವರ್ ಲೆಫ್ಟ್ ಸೈಡಿಂದ ನುಗ್ಗಿ ಬಂದೇ ಬಿಟ್ಟ. ಏನೂ ಆಗದೇ ಇದ್ದವನ ತರ ಸುಮ್ನೆ ರಸ್ತೆ ನೋಡ್ತಾ ಡ್ರೈವ್ ಮಾಡ್ತಾಯಿದ್ದೆ. ಆಟೋ ಡ್ರೈವರ್ ಆಗ್ಲೇ ಸಹಸ್ರನಾಮ ಮುಗಿಸುವ ಹಂತಕ್ಕೆ ಬಂದಿದ್ದ. ಅಪ್ಪಿತಪ್ಪಿ ಎಡಬಾಗಕ್ಕೆ ನೋಡ್ಲೇ ಇಲ್ಲ. ಅವನ ಸಹಸ್ರನಾಮ ಕಿವಿಗೆ ಬೀಳೋದು ಬೇಡ ಅಂತ ಜೋರಾಗಿ ಎಫ್.ಎಮ್ ರೇಡಿಯೋ ತಿರುಗಿಸಿದ್ದೆ. ಒಳ್ಳೇ ಡ್ರೈವರ್ ಅಂತ ಅನ್ಸತ್ತೆ ಅಥವಾ ಅವ್ನಿಗೆ ಬರೀ ಸಹಸ್ರನಾಮದ ಶಬ್ದಕೋಶವಿತ್ತು ಅನ್ಸತ್ತೆ. ಬೇರೆ ಏನು ಹೇಳದೇ ಸುಮ್ನಾಗಿಬಿಟ್ಟ. ನಾನೋ ಕುತ್ತಿಗೆ ಉಳಿಕಿದಾಗ ಹೇಗೆ ನಾವು ಒಂದೇ ಡೈರಕ್ಷನ್ ನಲ್ಲಿ ನೋಡ್ತೇವೋ ಹಾಗೆ ರಸ್ತೆ ನೋಡ್ತಾಯಿದ್ದೆ. ಪಾಪ ಡ್ರೈವರ್, ಕೋಣನ ಮುಂದೆ ಕಿನ್ನರಿ ಬಾರ್ಸಿದ್ರೆ ಪ್ರಯೋಜನ ಇಲ್ಲ ಅಂತ ಭಾವಿಸಿ ಲೆಫ್ಟ್ ಸೈಡಿಗೆ ರೈಟ್ ಹೇಳ್ದ. ನಾನು ಬದುಕಿದೆಯಾ ಬಡಜೀವವೇ ಅಂತ ಮುಂದೆ ಹೋದೆ. ಪಾಪ ಡ್ರೈವರ್ ಆ ಚಳಿಯಲ್ಲಿ ನಡುಗುತ್ತಾ ಆಟೋ ಓಡಿಸಿದ್ದು ನೋಡಿ ಬೇಜಾರಾಯ್ತು. ನಾನು ಕಾರು ನಿಲ್ಸಿ ತಪ್ಪಾಯ್ತು ಗುರು ಅಂತ ಕ್ಷಮೆ ಕೇಳಿದ್ರೆ ಅವನ ಆರ್ಭಟ ಇನ್ನೂ ಹೆಚ್ಚಾಗುತಿತ್ತೇನೋ. ಸಪೋರ್ಟ್ ಗೆ ಒಂದಿಷ್ಟು ಆಟೋಗಳು ಬರ್ತಿದ್ವು. ಎಲ್ಲಾ ಸೇರಿ ನನಗೆ ಕಡುಬು ಕೊಟ್ರೂ ಕೊಡ್ತಿದ್ರು. ಅದ್ಕೆ ನಾನು ಮನ್ಸಲ್ಲಿ ಸಾರಿ ಅಂತ ಹೇಳಿ ಅವನ ಕಡೆ ನೋಡ್ಲೇ ಇಲ್ಲ.

ಹತ್ತು ವರ್ಷದ ಹಿಂದೆ ರಾಜಾಜಿನಗರದ ಹತ್ರ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ನನ್ನ ಫ್ರೆಂಡ್ ಜೊತೆ ಬೈಕ್ ನಲ್ಲಿ ಹೋಗ್ತಾಯಿದ್ದೆ. ಆಗಷ್ಟೆ ಮಳೆ ಬಂದು ಹೋಗಿತ್ತು. ಸಣ್ಣಕ್ಕೆ ಜುಮುರು ಇತ್ತು. ಒಳ್ಳೇ ವಾತಾವರಣ. ನನ್ನ ಫ್ರೆಂಡೋ ಜೋರಾಗಿ ಬೈಕ್ ಓಡಿಸ್ತಾಯಿದ್ದ. ಮುಂದೆ ಹೋಗ್ತಾಯಿದ್ದ ಸ್ವರಾಜ್ ಮಜ್ದಾ ನ ಸೈಡ್ ಹೊಡಿಬೇಕು ಅಂತ ಇನ್ನೂ ಸ್ಪೀಡ್ ಆಗಿ ಹೋದ. ಇಬ್ರ ಮದ್ಯೆ ಕಾಂಪಿಟೇಷನ್. ಇನ್ನೇನು ನಮ್ಮ ಬೈಕ್ ಸ್ವರಾಜ್ ಮಜ್ಡ ನ ಪಾಸ್ ಮಾಡಬೇಕು ಎಂದಾಗ ದೊಪ್ಪನೆ ನನ್ ಮೇಲೆ ಮೇಲಿಂದ ಯಾರೋ ನೀರು ಹಾಕಿದಂತಾಯ್ತು. ಏನಾಯ್ತು ಅಂತ ನನ್ ಫ್ರೆಂಡ್ ಕೇಳ್ದ. ಸ್ವರಾಜ್ ಮಜ್ದಾ ಹೋಗಾಯಿದ್ದ ಜಾಗದಲ್ಲಿ ನೀರು ನಿಂತಿತ್ತು. ಟೈರುಗಳು ಅವನ್ನು ನನಗೆ ಅಬಿಷೇಕ ಮಾಡಿದ್ವು. ಎಂತಾ ಸಿಟ್ಟು ಬಂದಿತ್ತು ನನಗೆ. ಜೋರಾಗಿ ಡ್ರೈವರ್ ಕಡೆ ಕೈ ಮಾಡಿ ಬೈಯ್ದೆ. ಅವ್ನು ನನ್ನ ಪರಿಸ್ಥಿತಿ ನೋಡಿ ನಗಾಡೋಕೆ ಪ್ರಾರಂಭ ಮಾಡ್ತ. ನನ್ನನ್ನ ಒಮ್ಮೆ ಗಮನಿಸ್ಕೊಂಡೆ. ನನಗೆ ನಗು ಬಂತು. ಜೋರಾಗಿ ನಾನು ನಕ್ಕೆ.

ಮಳೇ ನೀರೇ ಹಾಗೆ. ಅದರಲ್ಲಿ ನೆಂದ ಅನುಭವ ಮರೆಯೋಕೇ ಆಗೊಲ್ಲ. ಇಂದು ಕಾರನ್ನು ಮಳೆಯಲ್ಲಿ ನೆನಸಿ ಬಂದ ನನಗೆ ಊರ ನೆನಪಾಗಿತ್ತು. ಮನೆಯಿಂದ ಶಾಲೆ ಬಹಳ ದೂರವಿತ್ತು. ರಸ್ತೇನಲ್ಲೂ ಹೋಗಬಹುದಾಗಿತ್ತು. ಆದ್ರೆ ನಾವೆಲ್ಲಾ ಶಾರ್ಟ್ ಕಟ್ ನಲ್ಲಿ ಹೋಗ್ತಾಯಿದ್ದೆವು. ಅಂದ್ರೆ ಗದ್ದೆಯಲ್ಲಿ ಹೋದ್ರೆ ತುಂಬ ಹತ್ರ ಆಗ್ತಿತ್ತು. ಮದ್ಯೆ ಗದ್ದೆಗಳ ಸಾಲು. ಗದ್ದೆ ನೆಟ್ಟಿಗಿಂತ ಮುಂಚೆ ಮಳೆ ಬಂದರೆ ತುಂಬಾ ಚೆಂದ. ನಾವೆಲ್ಲಾ ಸಾಲಾಗಿ ಕೈ ಹಿಡಿದುಕೊಂಡು ನೀರನ್ನು ಕಾಲಲ್ಲಿ ತಳ್ತಾ ಹೋಗ್ತಿದ್ವಿ. ಆ ನೀರು ಸಣ್ಣ ಸಣ್ಣ ಅಲೆಯಾಗಿ ಮುಂದೆ ಮುಂದೆ ಹೋಗ್ತಾಯಿದ್ವು. ಅದರ ಹಿಂದೆ ನಾವು. ಮುಂದೆ ಯಾರಾದ್ರು ಹೋಗ್ತಾಯಿದ್ರೆ ಅವರ ಹತ್ರ ಸುಮ್ನೆ ಹೋಗಿ ಜೋರಾಗಿ ಒಂದ್ ಸಾರಿ ಹಾರ್ತಿದ್ದೆ. ನೀರೆಲ್ಲಾ ಪ್ರೋಕ್ಷಣ್ಯವಾಗ್ತಾಯಿತ್ತು. ನಾನು ಮುಂದೆ ಹೋಗ್ತಾಯಿದ್ರೆ ನಂಗೂ ಹಾಗೆ ಮಾಡ್ತಾಯಿದ್ರು. ಮಳೆಗಾಲ ಅಂದ್ರೆ ಅದೆಷ್ಟು ಸುಂದರ. ಹಿಂದೆಲ್ಲಾ ಈಗಿನ ಹಾಗೆ ಛತ್ರಿಗಳು ಕಡಿಮೆ. ಹೆಚ್ಚಿನವರು ಕಂಬಳಿಕೊಪ್ಪೆ ಹಕ್ಕೊಂಡು ಶಾಲೆಗೆ ಬರ್ತಾಯಿದ್ರು. ನಾನು ಛತ್ರಿ ತಗೊಂಡು ಹೋಗ್ತಾಯಿದ್ದೆ. ಒಂದೆರಡು ಸಲ ಕಂಬಳಿ ಕೊಪ್ಪೆ ಬೇಕು ಅಂತ ಹಟ ಮಾಡಿ ಹಾಕ್ಕೊಂಡು ಹೋಗಿದ್ದು ಇದೆ. ಹೊರಗೆ ಚಳಿಯಿದ್ದರೆ ಕಂಬಳಿ ಕೊಪ್ಪೆ ಹಾಕ್ಕೊಂಡು ಹೋದ್ರೆ ಏನು ಮಜಾ ಗೊತ್ತಾ. ಮೈಯೆಲ್ಲಾ ಬೆಚ್ಚಗಿರತ್ತೆ. ಅದೇ ಗದ್ದೇ ನೆಟ್ಟಿ ಪ್ರಾರಂಭ ಆದ್ರೆ ನಮ್ಗೆ ಶಾಲೆಗೆ ಹೋಗೋಕೆ ಕಷವಾಗ್ತಾಯಿತ್ತು. ಗದ್ದೆ ಹಾಳಿ ಸರಿ ಮಾಡಬೇಕು ಅಂತ ಮಣ್ಣೆಲ್ಲಾ ಹಾಕಿರ್ತಿದ್ರು. ಅದೂ ಒಣಗಲಿಕ್ಕೆ ವಾರವೇ ಬೇಕಾಗ್ತಿತ್ತು. ಆಗೆಲ್ಲಾ ರಸ್ತೆನೇ ಗತಿ. ದದ್ದೆ ಹಾಳಿ ಒಣಗಿದ ತಕ್ಷಣ ಮತ್ತೆ ಗದ್ದೆಗೆ ಶಿಫ್ಟು. ಆದ್ರೆ ಗದ್ದೆ ಹಾಳಿಯ ಮೇಲೆ ಜಾಗರೂಕವಾಗಿ ಹೋಗಬೇಕಾಗಿತ್ತು. ಎಲ್ಲೋ ನೋಡ್ತಾ ಹೋಗ್ತಿದ್ರೆ ಗದ್ದೆಗೆ ಬಿದ್ದು ಮೈಯೆಲ್ಲಾ ಕೆಸರಾಗುತ್ತಿತ್ತು. ಮನೆಯಿಂದ ಪ್ರತಿದಿನ ಅಮ್ಮ ಶಾಲೆಗೆ ಹೋಗೋವಾಗ ಮಳೇಲಿ ನೆನಿಬೇಡ, ಜ್ವರ ಬರತ್ತೆ ಅಂತೆಲ್ಲಾ ಹೇಳಿ ಕಳಿಸ್ತಾಯಿದ್ಲು. ಮನೆಯಿಂದ ಸ್ವಲ್ಪ ದೂರ ಬಂದು ಗದ್ದೆ ಸೇರಿದ ತಕ್ಷಣ ಅಮ್ಮ ಹೇಳಿದ್ದೆಲ್ಲಾ ಮರ್ತೇ ಹೋಗ್ತಿತ್ತು. ಶಾಲೆನಲ್ಲಿ

ಮೇಷ್ಟ್ರು ಯಾಕೆ ಫುಲ್ ನೆಂದ್ಕೊಂಡು ಬಂದಿದೀರ ಅಂತ ಕೇಳಿದ್ರೆ, ಜೋರು ಮಳೆ ಸಾರ್ ಅಂತ ರೀಲ್ ಬಿಡ್ತಾಯಿದ್ವಿ. ಆದ್ರೆ ನಾವೊಂದಿಷ್ಟು ಜನ ಮಾತ್ರ ಹೆಚ್ಚು ನೆಂದಿರ್ತಿದ್ವಿ. ಒಂದಷ್ಟು ದಿನ ಮೇಷ್ಟ್ರು ನಮ್ಗೆ ಹೇಳಿದ್ರು. ಆಮೇಲೆ ಸುಮ್ನಾಗ್ಬಿಟ್ರು. ಆದ್ರೆ ಮಳೆಯ ನೀರಿನ ಆಟದ ಸವಿ ಅನುಭವಿಸೋ ಯೋಗ ನನಗೆ ಹೆಚ್ಚು ದಿನ ಸಿಗಲಿಲ್ಲ. ಪ್ರಾಥಮಿಕ ಶಾಲೆ ಮಾತ್ರ ಊರಲ್ಲಿ ಮಾಡಿದ್ದು. ನಂತರ ಬಂದಿದ್ದು ಬೆಂದಕಾಳೂರಿಗೆ. ಹಾಗಾಗಿ ಅದೆಲ್ಲಾ ಮಿಸ್ ಆಯ್ತು. ಆಗೆಲ್ಲಾ ಎಷ್ಟ್ ನೀರಲ್ಲಿ ಆಡಿದ್ರೂ, ನೆಂದರೂ ಏನೂ ಆಗ್ತಾಯಿರಲ್ಲಿ. ಆದ್ರೆ ಇಲ್ಲಿ ಚೂರು ನೆಂದರೂ ಸಾಕು ಮರುದಿನ ರೋಗ ಎಂಟ್ರಿ ಕೊಟ್ಟಿರತ್ತೆ.

ಏನಾದ್ರು ನಮ್ಮ ಜೀವನದಲ್ಲಿ ರಿವೈಂಡ್ ಅಂತ ಇದ್ದಿದ್ರೆ ನಾನು ಮತ್ತೆ ಮತ್ತೆ ಮಳೆಗಾಲಕ್ಕೆ ಹೋಗ್ತಾಯಿದ್ನೇನೋ. ಖಂಡಿತಾ ಈ ಯಾಂತ್ರಿಕ ಬದುಕಿನತ್ತ ರಿವೈಂಡ್ ಮಾಡ್ತಾಯಿರಲ್ಲಿ.

Thursday, October 14, 2010

ಸಂಗ್ರಹ - ವಿಜಯ Next ನಲ್ಲಿ

ದಿನಾಂಕ 15 ಅಕ್ಟೋಬರ್ 2010 ವಿಜಯ Next ಪತ್ರಿಕೆಯಲ್ಲಿ ಸಂಗ್ರಹ ಬ್ಲಾಗ್ ಬಗ್ಗೆ ಬಂದ ಲೇಖನ




Monday, October 4, 2010

ಓಡಿ ಹೋದ ಪ್ರಸಂಗ

ಹೀಗೊಂದು ಸಂಭಾಷಣೆಯ ವಿವರ

"ಅವನು ಓಡಿಹೋದ"
"ಹೌದಾ!!!.. ಸಾಲ ಜಾಸ್ತಿ ಮಾಡ್ಕೊಂಡಿರಬೇಕು,
ಏನೋ ಬಾನಗಡಿ ಮಾಡ್ಕೊಂಡಿರಬೇಕು,
ಜೀವನದಲ್ಲಿ ಬೇಸರ ಬಂದಿರಬೇಕು,
.............................................
.............................................
............................................."


"ಅವಳು ಓಡಿಹೋದ್ಲು"

"ಹೌದಾ!!! ಯಾರ ಜೊತೆ?"

Thursday, September 23, 2010

ಮೂರ್ಚೆ ಹೋಗೋ ಪ್ರಸಂಗಗಳು

ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ನಡೆದ ಕೆಲವು ಮೂರ್ಚೆ ಹೋಗೋ ಪ್ರಸಂಗಗಳು
~~~~~~~~~~

ಘಟನೆ ಒಂದು

ಮಾವನ ಮನೆಗೆ ಹೋಗಿದ್ದೆ. ಅಲ್ಲಿ ಸಿಕ್ಕ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ

ಪುರೋಹಿತರುಃ "ನಾನು ನಿಮ್ಮನಿಗೆ ಸುಮಾರು 45 ವರ್ಷದ ಹಿಂದೆ ಹೋಗಿದ್ದಿ. ನಿಮ್ಮನೇಲಿ ಚಂಡಿ ಹೋಮ ಇತ್ತು. ಆಗ ನಿಂಗೆ ಎರ್ಡು ವರ್ಷ ಅನಿಸ್ತು. ಆವಾಗ್ಲೆ ನಿನ್ ಹಳೇ ಹೆಸ್ರು ಮಹೇಶ ಬದ್ಲು ಯಜ್ಞೇಶ್ ಅಂತ ಇಟ್ಟಿದ್ದು"
ನಾನುಃ "!@#$%... (ಹಂಗಾದ್ರೆ ನಂಗೀಗ 47 ವರ್ಷ!!!!..)"

ನಾನು ತಕ್ಷಣ ಮೂರ್ಚೆ ಹೋದೆ!!!

~~~~~~~~~~

ಘಟನೆ ಎರ್ಡು

ಸಮಯವಾಗ್ತಾಯಿತ್ತು. ಪುರೋಹಿತರಿಗೆ ಆದಷ್ಟು ಬೇಗ ಕಾರ್ಯಕ್ರಮ ಮುಗಿಸಬೇಕು. ಕಾರ್ಯಕ್ರಮಕ್ಕೆ ಕುಳಿತವನು ನಾನು

ಪೂಜೆ ಬಾರೀ ಸ್ಪೀಡ್ ನಲ್ಲಿ ನಡಿತಾಯಿತ್ತು. ಪುರೋಹಿತರು ಯಾರು ಇಲ್ಲ ಅಂದ ತಕ್ಷಣ ಮಂತ್ರದ ಸಾಲು ಸಾಲನ್ನೆ ಹಾರಿಸುತ್ತಿದ್ದರು. ನಾನೋ ಪುರೋಹಿತ ಕುಟಂಬದಿಂದ ಬಂದವನು . ಪೂರ್ತಿ ಮಂತ್ರ ಬರದೇ ಇದ್ದರೂ ಸುಮಾರು ಗೊತ್ತು. ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಮುಗಿದ ಮೇಲೆ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ

ಪುರೋಹಿತರುಃ " ನಿಂಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಬತ್ತಾ?"

ನಾನುಃ "ಹೇಳಕೆ ಪೂರ್ತಿ ಬತ್ತಲ್ಲೆ. ಆದ್ರೆ ಎಲ್ಲಾ ಗೊತ್ತಿದ್ದು"

ಪುರೋಹಿತರು ತಕ್ಷಣ ಮೂರ್ಚೆ ಹೋದರು!!! (ಅವರ ಬಂಡವಾಳ ನನ್ಗೆ ಗೋತ್ತಾಯ್ತಲ್ಲ ಅಂತ)

~~~~~~~~~~

ಘಟನೆ ಮೂರು
ಪೂಜೆ ಎಲ್ಲಾ ಮುಗಿತು. ಪುರೋಹಿತರು ಆಶೀರ್ವಾದ ಮಾಡ್ತಾಯಿದ್ದರು

ಪುರೋಹಿತರುಃ "ಈ ಕುಟುಂಬಕ್ಕೆ ಒಳ್ಳೇದಾಗ್ಲಿ...................
............................ ನೂತನ ವಧೂ ವರರಿಗೆ ಒಳ್ಳೇದಾಗ್ಲಿ"

ಜಯಶ್ರೀಃ "ರೀ ನಮ್ಗೆ ಮದ್ವೆ ಆಗಿ 4 ವರ್ಷ ಆತು.. ಇವ್ರು ನೂತನ ವಧೂ ವರ ಅಂತ ಹೇಳ್ತಾಯಿದ್ದ" ಅಂತ ಹೇಳ್ತಾ ಹೇಳ್ತಾ ಮೂರ್ಚೆ ಹೋದ್ಲು.

~~~~~~~~~~

ಘಟನೆ ನಾಲ್ಕು

ಸ್ಥಳಃ ಬಂಗಲಗಲ್ಲು ನಾರಾಯಣ ಭಟ್ಟರ
(ನಮ್ಮನೆ) ಮನೆ ದೇವರ ಕೋಣೆ.

ಪಾತ್ರದಾರಿಗಳುಃ ಪುರೋಹಿತರು, ನಾನು ಮತ್ತು ದೇವರ ಕೋಣೆಯಲ್ಲಿದ್ದ ಸಮಸ್ತ ದೇವರುಗಳು. ಎಲ್ಲರೂ ಎದುರು ಬದ್ರು ಕುಳಿತಿದ್ದರು

ಪುರೋಹಿತರುಃ "ಸ್ನಾನ ಆತಾ, ಸಂದ್ಯಾವಂದನೆ ಮಾಡು. ನಾನು ಅಷ್ಟ್ರಲ್ಲಿ ಜಪ ಮಾಡ್ತಿ"
ನಾನುಃ " ಓಂ ಭುವು ರುಗ್ವೇದಾಯಸ್ವಾಹಾ... ಓಂ ಭುವ ಯಜುರ್ವೇದಾಯ ಸ್ವಾಹಾ.....
.......................... ................ ............... .................. .......
................... .............. .................... .............................."

ದೇವರಕೋಣೆಯಲ್ಲಿದ್ದ ಸಮಸ್ತದೇವರುಗಳು ನನ್ನ ಮಂತ್ರ ಕೇಳಿ ಮೂರ್ಚೆ ಹೋಗಿದ್ದರು

ಸ್ವಲ್ಪ ಹಿಂದುಗಡೆ ಇದ್ದ ದೇವ್ರಿಗೆ ನನ್ನ ಮಂತ್ರ ಕೇಳಿಸ್ಲಿಲ್ಲ. ಆ ದೇವರು ಮುಂದೆ ಬಂದು "ಬೆಂಗಳೂರಿಗೆ ಹೋದವನೆ ಸಂದ್ಯಾವಂದನೆಯನ್ನು ಕಲಿ" ಅಂತ ಹೇಳಿದ್ರು.

ಆಗ ನಾನು ಮೂರ್ಚೆ ಹೋದೆ

Monday, August 9, 2010

ಕೆಲವೊಮ್ಮೆ... ಕೆಲವೊಮ್ಮೆ

ಕೆಲವೊಮ್ಮೆ ಮಾತುಗಳಿಗೆ ಪ್ರತಿಮಾತು ಇದ್ದಾಗ,
ಕೆಲವೊಮ್ಮೆ ಅರ್ಥವಿಹೀನ ಚರ್ಚೆಯು ನಡೆಯುತ್ತಾ ಇದ್ದಾಗ,
ಕೆಲವೊಮ್ಮೆ ನಮಗೆ ವಿಷಯ ಜ್ಞಾನವಿಲ್ಲದೇ ಇದ್ದಾಗ,
ಕೆಲವೊಮ್ಮೆ
ಜೊತೆಗಿದ್ದವರೂ ಮೌನವಾಗಿ ಇದ್ದಾಗ,
ಕೆಲವೊಮ್ಮೆ ಕೆಲವೊಮ್ಮೆ,
ಸುಮ್ಮನಿರುವುದು ಒಳ್ಳೆಯದು..

Never Give Up

Sunday, July 18, 2010

ಕೆಟ್ಟಿದೆ, ಸರ್ವರ್ ಕೆಟ್ಟಿದೆ. ನಿಮಗೆ ಮಿಠಾಯಿ ಇಲ್ಲ.

ನಿನ್ನೆ ಆರ್ಕುಟ್ ಓಪನ್ ಮಾಡಿದಾಗ ಬಂದ ಸ್ಕ್ರೀನು.. ನಿಮಗ್ ಈ ರೀತಿ ಸ್ಕ್ರೀನ್ ಬಂತೇ?

ಕನ್ನಡಕ್ಕೆ ತರ್ಜುಮೆ ಮಾಡಿದವರಿಗೆ ಕನ್ನಡ ರಾಜ್ಯೋಸ್ತವ (ನೂರಕ್ಕೆ ತೊಂಬತ್ತು ಭಾಗ ಜನ ರಾಜ್ಯೋತ್ಸವ ಅನ್ನೋಕೆ ರಾಜ್ಯೋಸ್ತವ ಅಂತಾರೆ) ಪ್ರಶಸ್ತಿ ಕೊಡಬಹುದಲ್ಲವೇ?

Thursday, July 15, 2010

ಆಕೆ ಬರೋಬ್ಬರಿ 34 ವರ್ಷಗಳ ನಂತರ ಫಿಲ್ಮ್ ನೋಡಿದ್ದಳು.

ಹೌದು, ಮೊನ್ನೆ ಆಕೆ ಫಿಲ್ಮ್ ನೋಡಿದ್ದು ಬರೋಬ್ಬರಿ 34 ವರ್ಷಗಳ ನಂತರ. "ನಾ ನಿನ್ನ ಮರೆಯಲಾರೆ" ಚಿತ್ರನೇ ಆಕೆ ನೋಡಿದ್ದ ಕೊನೆಯ ಚಿತ್ರವಾಗಿತ್ತು. ಆ ಫಿಲ್ಮ್ ನಂತರ ಆಕೆ ಟಾಕೀಸ್ ನಲ್ಲಿ ನೋಡಿದ್ದು ಮೊನ್ನೆ 10 ಭಾನುವಾರ, ಜುಲೈ 2010 ಕ್ಕೆ.

ಯಾರಿರಬಹುದು ಅನ್ನೋ ಕುತೂಹಲ ನಿಮ್ಮಲ್ಲಿರಬಹುದು. ಆಕೆ ಬೇರೆ ಯಾರು ಅಲ್ಲ, ನನ್ನಮ್ಮ. ಮೊನ್ನೆ ಭಾನುವಾರ ನಾನು ಜಯಶ್ರೀ ಹೀಗೆ ಮಾತಾಡುತ್ತಾ ಇದ್ದಾಗ ಜಯಶ್ರೀ "ಎರಡನೇ ಮದುವೆ" ಫಿಲ್ಮ್ ನೋಡೋಣ್ವಾ ಅಂದ್ಲು. ಅದ್ಕೆ ನಾನು ಮುಂದಿನವಾರ ಹೋಗೋಣ ಅಂದೆ. ಇಬ್ಬರಿಗೂ ಓಕೆಯಾಯಿತು. ತಕ್ಷಣ ನನ್ ಮನ್ಸಿಗೆ ಬಂದಿದ್ದು ಯಾಕೆ ಈ ವಾರ ಹೋಗಬಾರ್ದು. ಅಮ್ಮ ಬಂದಿದ್ದಾಳೆ, ಮುಂದಿನ ವಾರದ ತನಕ ಇರೊಲ್ಲ. ಆಕೆನೂ ಫಿಲ್ಮ್ ಗೆ ಕರ್ಕೊಂಡ್ ಹೋಗೋಣ ಅಂತ. ತಕ್ಷಣ ಇಬ್ರೂ ಮಾತಾಡಿ ಬಿಗ್ ಸಿನೆಮಾಸ್ ಟಾಕೀಸ್ ನಲ್ಲಿ ಟಿಕೇಟ್ ಬುಕ್ ಮಾಡಿದ್ವಿ. ಆಮೇಲೆ ಅಮ್ಮನ ಹತ್ರ ಊಟ ಮಾಡಿದ್ಮೇಲೆ ಫಿಲ್ಮ್ ಗೆ ಹೋಗೋಣ ಅಂದೆ. ಅದ್ಕೆ ನಾ ಬರೊಲ್ಲ, ನೀವು ಹೋಗಿ ಅಂದ್ಲು. ಇಲ್ಲ ಟಿಕೇಟ್ ಬುಕ್ ಮಾಡ್ಸಿದ್ದೇನೆ. ನೀನು ಬಾ ಅಂದೆ. ಅಮ್ಮ ಹೂಂಗುಟ್ಟಿದ್ದಳು.

ಊಟ ಮಾಡಿ ನಾವು ಗೋಪಾಲನ್ ಆರ್ಕೇಡ್ ನಲ್ಲಿ ಇರೋ ಬಿಗ್ ಸಿನೆಮಾಸ್ ಟಾಕೀಸ್ ಗೆ ಹೋದ್ವಿ. ಮಾಲ್ ಮತ್ತೆ ಅದ್ರಲ್ಲಿ ಇರೋ ಟಾಕೀಸ್ ಎಲ್ಲ ಅಮ್ಮನಿಗೆ ಆಶ್ಚರ್ಯ ತಂದಿತ್ತು. ಸಾಗರದಲ್ಲಿ ಬರೀ ಟಾಕೀಸ್ ಇದ್ದಿದ್ದನ್ನು ನೋಡಿದ್ದ ಅಮ್ಮನಿಗೆ ಇಲ್ಲಿ ಎಲ್ಲಾ ಇದ್ದಿದ್ದು ನೋಡಿ ವಿಶೇಷ ಅನ್ಸಿರಬೇಕು. ಹೋಗಿ ಮೆತ್ತನೆಯ ಸೋಫಾದಲ್ಲಿ ಕುಳಿತ್ಗೊಂಡು ಫಿಲ್ಮ್ ನೋಡಿದ್ವಿ. ಏ.ಸಿ ರೂಮ್ ಆಗಿದ್ದ್ರಿಂದ ಅಮ್ಮನಿಗೆ ಸ್ವಲ್ಪ ಚಳಿಯಾಗಿತ್ತು ಅನ್ಸತ್ತೆ. ಸೀರೆ ಫುಲ್ ಹೊದ್ಕೊಂಡು ಫಿಲ್ಮ್ ನೋಡಿದ್ಳು. ಮದ್ಯೆ ಪಾಪ್ ಕಾರ್ನ್ ತಂದಿದ್ದೆ. ಅದನ್ನು ತಿಂತಾ ಫುಲ್ ಖುಷಿಲಿ ಇದ್ಲು. ಫಿಲ್ಮ್ ಮುಗ್ಸಿ ಮನೆಗೆ ಹೋಗೋವಾಗ ನೀನು ಈ ಹಿಂದೆ ಯಾವಾಗ ಟಾಕೀಸ್ ನಲ್ಲಿ ಫಿಲ್ಮ್ ನೋಡಿದ್ದೆ ಅಂತ ಕೇಳ್ದೆ. ಅದ್ಕೆ ರಾಜ್ ಕುಮಾರ್ ದು ಫಿಲ್ಮ್ "ನಾ ನಿನ್ನ ಮರೆಯಲಾರೆ" ನೋಡಿದ್ದು. ಆಮೇಲೆ ಟಾಕೀಸ್ ಗೆ ಹೋಗ್ಲಿಲ್ಲ ಅಂದಿದ್ಳು.

ದೂರದ ಮಲೆನಾಡಿನ ಗುಡ್ಡದ ಮೇಲಿದ್ದ ನಮ್ಮ ಮನೇಲಿ ದಿನವಿಡೀ ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ ಅಮ್ಮನಿಗೆ ದೂರದ ಸಾಗರಕ್ಕೆ ಹೋಗಿ ಫಿಲ್ಮ್ ನೋಡೋ ಅವಕಾಶ ಸಿಗ್ತಾಯಿದ್ದಿದ್ದು ಬಹಳ ಕಡಿಮೆ. ಹಾಗಂತ ಆಕೆಗೆ ಟಾಕೀಸ್ ಗೆ ಹೋಗಿ ನೋಡೋ ಆಸಕ್ತಿನೂ ಇರ್ಲಿಲ್ಲ. ಮನೇಲಿ ಟಿ.ವಿ ನಲ್ಲಿ ಬರೋ ಫಿಲ್ಮ್ಸ್/ದಾರವಾಹಿನ ಅಮ್ಮ ಯಾವತ್ತೂ ಮಿಸ್ ಮಾಡ್ಕೊಳಲ್ಲ. ಮೊನ್ನೆ ಫುಟ್ಬಾಲ್ ನೋಡೋಣ ಅಂತ ಹಾಲ್ ಗೆ ಬಂದು ನೋಡಿದ್ರೆ ಅಮ್ಮ ಹಿಂದಿ ಸೀರಿಯಲ್ ನೋಡೋದ್ರಲ್ಲಿ ಫುಲ್ ಬ್ಯಸಿ. ಚೈಂಜ್ ಮಾಡ್ಬೇಕಾ ಅಂತ ಕೇಳಿದ್ಲು. ನಾ ಬೇಡ, ನೀನು ನೋಡು ಅಂದಿದ್ದೆ. ಹಿಂದಿ ಪೂರ ಅರ್ಥ ಆಗ್ದೇ ಇದ್ರೆ ಏನಂತೆ, ಚಿತ್ರ ನೋಡಿದ್ರೆ ಅರ್ಥ ಆಗತ್ತೆ ಅಂದಿದ್ದ್ಲು. ನಾನು ನಕ್ಕಿದ್ದೆ.

ಇಂದು ಬಂದು "ನಾ ನಿನ್ನ ಮರೆಯಲಾರೆ" ಚಿತ್ರ ಯಾವಾಗ ಬಂದಿತ್ತು ನೋಡಿದೆ. ಅದು ಬಂದಿದ್ದು 1976 ರಲ್ಲಿ. ನಾ ಹುಟ್ಟೋದಕ್ಕಿಂತ ಮುಂಚೆ!!!

Friday, July 9, 2010

ಸಂಗ್ರಹ ವಿಜಯಕರ್ನಾಟಕದಲ್ಲಿ

"ನೀನು ಆಫೀಸ್ ನಲ್ಲಿ ಕೆಲ್ಸ ಮಾಡ್ತ್ಯ ಅಥ್ವಾ ಹಾಡು ಬರಿತ್ಯಾ" ಬೆಳ್ಳಂಬೆಳಗ್ಗೆ ಕಾರು ತೆಗಿತಾ ಇದ್ದಾಗ ಮನೆಯ ಓನರ್ ಶ್ರೀಧರಣ್ಣ ಕೇಳಿದ ಪ್ರಶ್ನೆ. ಒಮ್ಮೆ ನನ್ನ ಹುಬ್ಬು ಮೇಲೆ ಹೋಗಿ ಬಂತು. "ಯಾಕೆ" ಅಂತ ನಗಾಡುತ್ತಾ ಕೇಳಿದೆ. ಅದಕ್ಕೆ "ನಿನ್ ಹೆಸ್ರು ಇವತ್ತು ವಿಜಯ ಕರ್ನಾಟಕದಲ್ಲಿ ಬೈಂದು" ಅಂದ. ಒಂದ್ಸಲ ಆಶ್ಚರ್ಯ ಮತ್ತು ಸ್ವಲ್ಪ ಭಯನೂ ಆಯ್ತು. ಇದೇನಪ್ಪಾ ನನ್ ಹೆಸ್ರು ವಿಜಯಕರ್ನಾಟಕ ಪೇಪರ್ ನಲ್ಲಿ ಅಂತ. ಅಷ್ಟೊತ್ತಿಗೆ ಶ್ರೀಧರಣ್ಣನ ಹೆಂಡತಿ ರಾಧಕ್ಕ "ನೀನು ಹಾಡು ಬರಿತ್ಯಾ" ಅಂದಾಗ ಇನ್ನೂ ಕನ್ಫ್ಯೂಸ್.. ಕೊನೆಗೆ ಗೊತ್ತಾಯ್ತು. ನಾನು ಬರಿತಾಯಿರೋ "ನಮ್ಮ ಸಂಗ್ರಹ" ಬ್ಲಾಗ್ ಬಗ್ಗೆ ವಿಜಯಕರ್ನಾಟಕದ ಲವಲvk ಯಲ್ಲಿ ಬಂದಿತ್ತು.

ಉತ್ತಮ ಸಾಹಿತ್ಯ/ಉತ್ತಮ ಸಂಗೀತ ಇರೋ ಹಾಡುಗಳೆಂದ್ರೆ ನನಗೆ ತುಂಬಾ ಇಷ್ಟ. ಹಾಗೆ ಇಷ್ಟವಾಗೋ ಹಾಡುಗಳ ಸಾಹಿತ್ಯ ಮಾತ್ರ ನೆನ್ಪಲ್ಲಿ ಇರೊಲ್ಲ. ಮನ್ಸಿಗೆ ತೋಚಿದ್ದನ್ನೆಲ್ಲಾ ಆ ಹಾಡಿಗೆ ತಕ್ಕ ಹಾಗೆ ಸೇರಿಸಿ ಹಾಡ್ತಾಯಿರ್ತೀನಿ. ಜಯಶ್ರೀ ನನ್ನ ಸಾಹಿತ್ಯ ಕೇಳಿ ಯಾವಾಗ್ಲು ನಗ್ತಾ ಇದ್ಲು. ಕೊನೆಗೆ ಒಂದು ದಿನ ಮನ್ಸಿಗೆ ಬಂದಿದ್ದು ನಾನ್ಯಾಕೆ ಇಷ್ಟವಾಗೋ ಹಾಡುಗಳನ್ನು ಒಂದು ಬ್ಲಾಗ್ ನಲ್ಲಿ ಬರೀಬಾರ್ದು ಅಂತ. ಹೇಗೂ ನನ್ನ ಹತ್ತಿರ ಒಳ್ಳೊಳ್ಳೆ ಹಾಡುಗಳು ಇದ್ದವು. ಅದನ್ನ ಕೇಳುತ್ತಾ ಸಾಹಿತ್ಯ ಬರೆದರಾಯಿತು. ಇಂಟರ್ನೆಟ್ ನಲ್ಲಿ ಹುಡುಕಿದ್ರೂ ಸಿಗತ್ತೆ, ಸಾಹಿತ್ಯ ರಚೆನಕಾರರ ಪುಸ್ತಕಗಳು ಸಿಗತ್ವೆ. ಅದನ್ನ ನೋಡಿ ಬರೀಬಹುದು. ಸಮಯ ಸಿಕ್ಕಾಗ/ಮನಸ್ಸಿಗೆ ಸಂತಸ/ಬೇಸರವಾದಾಗ ಒಮ್ಮೆ ಬ್ಲಾಗ್ ಗೆ ಭೇಟಿಯಿತ್ತು ಹಾಡುಗಳಲ್ಲಿ ಇರೋ ಸಾಹಿತ್ಯ ಓದ್ತಾಯಿದ್ರೆ ಎಲ್ಲಾ ನಾರ್ಮಲ್ ಮತ್ತು ಜೊತೆಗೆ ಮನ್ಸಿಗೆ ಉಲ್ಲಾಸ. ಬಿಡುವು ಸಿಕ್ಕಾಗ ಬರಿತಾಯಿದ್ದೆ. ಕೊನೆಗೆ ಇದರ ಜೊತೆ ವೀಡಿಯೋ ಇದ್ರೆ ನಾವು ವೀಡಿಯೋನ ನೋಡ್ತಾ ಹಾಡಬಹುದಲ್ಲ ಅನಿಸ್ತು. ಹಾಡಿಗೆ ವಿಡಿಯೋನ ಸೇರ್ಸಿದೆ. ಅದೆಷ್ಟೋ ಜನ ಇದನ್ನು ಬಂದು ಓದ್ತಾರೆ/ನೋಡ್ತಾರೆ. ಕೆಲವರು ಮೆಚ್ಚುಗೆಯ ಮಾತಾಡಿ ಹೋಗ್ತಾರೆ. ಇನ್ನು ಕೆಲವರು ತಮ್ಮ ಹತ್ತಿರ ಇರೋ ಹಾಡನ್ನು ನನಗೆ ಹಾಕಲು ಕೊಡ್ತಾರೆ.

ಇದೊಂದು ಕನ್ನಡಕ್ಕಾಗಿ ನನ್ನ ಸಣ್ಣ ಸೇವೆ. ಬೇರೆ ಯಾವ ಉದ್ದೇಶವೂ ಇಲ್ಲ. ಹಾಗಂತ ನಾನು ಯಾವ ಭಾಷೆಯನ್ನು ದ್ವೇಷಿಸಲ್ಲ. ನನ್ನ ಮಾತೃ ಭಾಷೆಯ ಬಗ್ಗೆ ಹೆಮ್ಮೆ. ನಾನು ನವಂಬರ್ ಕನ್ನಡಿಗನಲ್ಲ.

ಇಲ್ಲಿ ನಿಮ್ಮ ಹಾಡು ಇದ್ದು, ನಿಮಗೆ ಇಲ್ಲಿ ಇರೋದು ಇಷ್ಟವಿಲ್ಲದಿದ್ದರೆ ಖಂಡಿತಾ ಹೇಳಿ. ತೆಗೆಯುತ್ತೇನೆ.

ನಮಸ್ಕಾರಗಳು


Online link: http://www.vijaykarnatakaepaper.com/svww_zoomart.php?Artname=20100710l_002101010&ileft=52&itop=1053&zoomRatio=130&AN=20100710l_002101010

Blog: http://nammasangraha.blogspot.com

Wednesday, May 5, 2010

ಅಮ್ಮನಿಗಾಗಿ ಕೆಲವು ಹಾಡುಗಳು

Mother's Day ಹತ್ರ ಬಂತು. ಈಗ್ಲಾದ್ರು ಅಮ್ಮನ್ನ ನೆನ್ಪು (ಮರ್ತು ಹೋಗಿದ್ರೆ) ಮಾಡ್ಕೊಳ್ಳಿ...

ಅಮ್ಮನಿಗಾಗಿ ಕೆಲವು ಹಾಡುಗಳು - ಸಂಗ್ರಹದಲ್ಲಿ

Tuesday, February 2, 2010

ಹೊಸಾ ಗಾದೆ




ಅವ್ನಿಗೆ ಏನು ಗೊತ್ತು ಬದನೇಕಾಯಿ ಅನ್ನೋದು ಹಳೇ ಗಾದೆ...

ಅವ್ನಿಗೆ ಏನು ಗೊತ್ತು ಬಿ.ಟಿ ಬದನೇಕಾಯಿ ಅನ್ನೋದು ಹೊಸಾ ಗಾದೆ...