Sunday, December 13, 2009

ನಾನೇನಾಗಬೇಕು?

ನಾನೇನಾಗಬೇಕು?
ಪ್ರಶ್ನೆ ನನ್ನಲ್ಲಿ ಅನೇಕ ಸಲ ಹುಟ್ಟಿದೆ ಮತ್ತು ಉತ್ತರ ಸಿಗದೇ ಮತ್ತೆ ಮನಸ್ಸಿಂದ ಮರೆಯಾಗಿದೆ ಮತ್ತೆ ಹುಟ್ಟುತ್ತಲಿದೆ.

ನಿಮಲ್ಲಿಯೂ ಈ ಪ್ರಶ್ನೆ ಒಂದಲ್ಲಾ ಒಂದು ಸಾರಿ ಬಂದಿರೊತ್ತೆ. ಈ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿಲ್ಲಾ ಅಂದ್ರೆ ನಿಮಗೆ ಜೀವನದಲ್ಲಿ ಗುರಿಯೇಕೆ ಬೇಕು ಅಂತಿರತ್ತೆ ಅಥವಾ ಗುರಿಯೇನು ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರೊತ್ತೆ.



ಹೌದು ನಾನೇನಾಗಬೇಕು????

ಮನಸ್ಸಲ್ಲಿ ಎನೇನೋ ಹೋಯ್ದಾಟ ನಡಿತಾಯಿರೊತ್ತೆ. ಇತ್ತೀಚೆಗಷ್ಟೆ ವಿಜಯಕರ್ನಾಟಕದ ಲವಲವಿಕೆಯಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಏನೇನು ಸಾಧಿಸಬೇಕು ಅಂತ ಬರೆದುಕೊಂಡು (ನೂರಕ್ಕೂ ಹೆಚ್ಚು) ಅವೆಲ್ಲವನ್ನು ಸಾಧಿಸಿದನಂತೆ!!!. ಅದರಿಂದ ಸ್ಪೂರ್ತಿ ಪಡೆದು ನಾನು ಬರೆದೆ. ಸಾಧಿಸೋಕೆ ಆಗತ್ತೋ ಇಲ್ಲವೋ.. ಆದ್ರೂ ಬರೆದೆ...ಹದಿನೈದರಿಂದ ಇಪ್ಪತ್ತು ಗುರಿಗಳನ್ನು ಬರಿಯೋಕೆ ಸಾಧ್ಯವಾಯುತು ನೋಡಿ. ಆಮೇಲೆ ಏನು ಬರೆಯೋದು ಅಂತ ಗೊತ್ತಾಗ್ತಾಯಿಲ್ಲ. ನನ್ನ ಬಂಡವಾಳ ಏನೆಂದು ನನಗೇ ಗೊತ್ತಾಯಿತು :).... ನೀವು ಒಮ್ಮೆ ಪ್ರಯತ್ನಿಸಿ (ಇಷ್ಟರೊಳಗೆ ಪ್ರಯತ್ನ ಪಡದಿದ್ದರೆ)

ಈಗ ಬರೆದ ಗುರಿಯ ವಿಮರ್ಶೆ ಮಾಡ್ತಾಯಿದ್ದೀನಿ. ಸ್ವಲ್ಪವಾದರೂ ಗುರಿಯತ್ತ ಪ್ರಯತ್ನ ಮಾಡೋಣ ಅಂತ. ಅವ್ನು ಇದ್ನಂತೆ ಆಮೇಲೆ ಹೋದ್ನಂತೆ (ಮೇಲೆ) ಅನ್ನೋದು ಆಗೋದು ಬೇಡ.

Sunday, November 1, 2009

ಬದಲಾವಣೆ

ವರುಷ ಕ್ಷಣದಂತೆ ಕಳಿತಾಯಿದೆ. ನಿನ್ನೆ ಮೊನ್ನೆ ನೆಟ್ಟ ಬೀಜ, ಮೊಳಕೆಯೊಡೆದು ಹೊರ ಪ್ರಪಂಚಕ್ಕೆ ಬಂದು ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ತನ್ನ ಅಸ್ತಿತ್ವವನ್ನು ಸಾರಿ ಮೇಲೇರುತ್ತಿದೆ. ನಿನ್ನೆ ಮೊನ್ನೆ ಬರಿ ಮೈಯಲ್ಲಿ ಓಡಾದುತ್ತಿದದ್ದ ಸಣ್ಣ ಹುಡುಗರೆಲ್ಲಾ ಇಂದು ಬೆಳೆದು ಉತ್ತಮ ಜೀವನ ಸಾಧಿಸುತ್ತಿದ್ದಾರೆ. ನನಗೆ ವಯಸ್ಸಾಗುತ್ತಿದೆ ಅಂತ ಅವರನ್ನು ನೋಡಿದಾಗ ನೆನಪಾಗತ್ತೆ. ಆದರೆ ಕೆಲವು ಕ್ಷಣಗಳಲ್ಲಿ ಎಲ್ಲ ಮರೆತುಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ನಾನ್ಯಾರು ಅನ್ನೋ ಪ್ರಶ್ನೆ ಹುಟ್ಟತ್ತೆ. ನಾನೇನು ಮಾಡಬೇಕು, ನಾನೇನು ಮಾಡಿದ್ದೇನೆ, ನನ್ನ ಅಸ್ತಿತ್ವವೇನು ಅನ್ನೋ ಹತ್ತು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು ಉದ್ಭವವಾಗೊತ್ತೆ. ಸ್ವಲ್ಪ ಹೊತ್ತು ಮನಸ್ಸು ದ್ವಂದ್ವದಲ್ಲಿರೊತ್ತೆ. ಆಮೇಲೆ ಯಥಾಸ್ತಿತಿ. ದಿನ ಕ್ಷಣದಂತೆ ಹೋಗತ್ತೆ.

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

ಜಗಲಿಯಲ್ಲಿ ಅಜ್ಜಿ ಕುಳಿತು ಕವಳ ಹಾಕಿ ಏನನ್ನೋ ಯೋಚಿಸುತ್ತಿರುತ್ತಾಳೆ. ಪಕ್ಕದಲ್ಲಿ ನಾನು ಹೋಗಿ ಕುಳಿತು ಕವಳ ಹಾಕಿ ಕುಳಿತು ಯೋಚಿಸುತ್ತೇನೆ. ಆದರೆ ನನ್ನ ಯೋಚನೆಗಳಿಗೆ ಸರಿಯಾದ ಮಾರ್ಗವಿಲ್ಲ. ಯೋಚನೆಗಳು ಸಿಕ್ಕ ಸಿಕ್ಕೆಲ್ಲಾ ಕಡೆ ತುಂಬಿರುತ್ತವೆ. ಯಾವ ಯೋಚನೆ ಯಾವ ಕಡೆ ಎನ್ನೋದು ಇರೋದಿಲ್ಲ. ಯೊಚನೆಗಳು ಗಾಳಿಯಲ್ಲಿ ಲೀನವಾಗಿರುತ್ತವೆ. ಎಷ್ಟೋ ಹೊತ್ತು ಮೌನ. ಅಮ್ಮ ಕರೆದಾಗ ಎಚ್ಚರ, ವಾಸ್ತವ. ಮತ್ತೆ ಕೆಲ್ಲಸದಲ್ಲಿ ಮಗ್ನ. ಎಲ್ಲವೂ ಮರೆತುಹೋಗುತ್ತದೆ.

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

ನಾನು ಬದಲಾಗಬೇಕು, ನನ್ನಲ್ಲಿ ಇರೋ ಪ್ರತಿಭೆ ಹೊರಗೆ ಬರಬೇಕು, ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತಿ ಬರಬೇಕು. ಮನಸ್ಸಲ್ಲಿ ಸಕಾರಾತ್ಮಕ ಯೋಚನೆಗಳು ಮಾತ್ರ ಬರಬೇಕು, ನಾನು ಬದಲಾಗಬೇಕು ಅನ್ನೋದು ಎಂದು ಬರೊತ್ತೆ ಅನ್ನೋದೆ ನನಗೇ ತಿಳಿದಿಲ್ಲ. ಅದು ನನ್ನಿಂದನೇ ಬರಬೇಕು ಅಂತ ತಿಳಿದಿದ್ದರೂ ಇನ್ನೊಬ್ಬರು ನನ್ನನ್ನು ಜಾಗೃತಗೊಳಿಸಲಿ ಅಂತ ಬಯಸುತ್ತೇನೆ. ಮನಸ್ಸಿಗೆ ಬೇಸರವಾದಾಗ ಒಂಟಿಯಾಗಿ ಒಂದು ಸುತ್ತು ಹಾಕಿ ಬರುತ್ತೇನೆ. ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಮತ್ತದೇ ಬೇಸರ ಅದೇ ಕೆಲಸ ಅದೇ ಜೀವನ....

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

Sunday, October 18, 2009

ಸಾಕು ಮತ್ತು ಬೇಕು

"ಸಾಕು..ಸಾಕು..ಎಲ್ಲವೂ ಸಾಕು. ಇನ್ನು ಯಾವುದರ ಸಹವಾಸನೂ ಬೇಡ" ಅಂತ ಹೇಳಿತು ಸಾಕು

"ಯಾಕೆ ಸಾಕು??? ಇನ್ನೂ ಬೇಕು. ನಾನು ಮೇಲೇರಬೇಕು. ನನ್ನನ್ನು ಎಲ್ಲರೂ ಗುರುತಿಸಬೇಕು. ನಾನು ಇನ್ನೂ ಮೇಲೇರಬೇಕು" ಅಂತ ಹೇಳಿತು ಬೇಕು.

"ಮೇಲೇರಿ ಏನನ್ನು ಸಾಧಿಸುತ್ತೀಯಾ? ನೀನು ಮೇಲೇರಿದಂತೆ ನಿನಗೆ ಸುಖ ಸಂತೋಷವೇನಾದರೂ ಜಾಸ್ತಿ ಸಿಗುತ್ತದೆಯೋ? ನಾಲ್ಕು ಜನ ನಿನ್ನನ್ನು ನೋಡಿ ಅಥವಾ ನಿನ್ನ ಸಾಧನೆ ನೋಡಿ ಹೊಗಳಿದರೆ ನಿನಗೆ ವಿಶೇಷವಾದ ಕೋಡು ಎನಾದರು ಬರುತ್ತದೆಯೋ? ಅದಕ್ಕೆ ನಾನು ಹೇಳಿದ್ದು ಸಾಕು ಅಂತ"

"ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಅದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗತ್ತೆ. ಯಾರೂ ನಡೆಯದ ಹಾದಿಯಲ್ಲಿ ನಾವು ಸಾಗಬೇಕು. ಅದಕ್ಕೆ ಬೇಕು ಅಂದಿದ್ದು"

"ನೆಮ್ಮದಿ ಬರೀ ಸಾಧನೆ ಮಾಡಿದರೆ ಮಾತ್ರ ಸಿಗತ್ತಾ? ಎಲ್ಲಾ ನಮ್ಮ ಮನಸ್ಸಿನ ಮೇಲೆ ಡಿಪೆಂಡು. ಬೇಕು ಅಂದಾಗ ಬೇಕುವಿನ ಜೊತೆ ಅಪಾರ ನಿರೀಕ್ಷೆ ಬರೊತ್ತೆ. ಅದರ ಜೊತೆ ನಿರಾಸೆನೂ ಇರತ್ತೆ. ಸುಮ್ಮನೆ ಮನ್ಸು ಹಾಳಾಗತ್ತೆ. ಇದೆಲ್ಲಾ ಬೇಡ. ನಿನ್ನನ್ನು ನೀನು ಅರಿ. ಎಲ್ಲಾ ನಿನ್ನೊಳಗೇ ಇದೆ. ಅದನ್ನು ನೋಡು. ಹೊರಗೆ ಎಲ್ಲಾ ಟೊಳ್ಳು. ನಿಜವಾದ ಸುಖ ಸಂತೋಷ ನಿನ್ನಲೇ ಇದೆ. ನಿನ್ನನ್ನು ನೀನು ಗೆಲ್ಲು. ಬೇರೆ ಎಲ್ಲಾ ಬಕ್ವಾಸ್...ಬಂಡಲ್. ಅದ್ಕೆ ನಾನು ಹೇಳ್ತಾಯಿರೋದು ಎಲ್ಲಾ ಸಾಕು ಅಂತ."

ಹೀಗೆ ಸಾಗಿತ್ತು ಸಾಕು ಮತ್ತು ಬೇಕು ನಡುವಿನ ಸಂಭಾಷಣೆ. ಇದಕ್ಕೆ ಕೊನೆಯಿರಲಿಲ್ಲ. ಕೆಲವೊಮ್ಮೆ ಸಾಕು ಗೆದ್ದರೆ ಮತ್ತೆ ಕೆಲವೊಮ್ಮೆ ಬೇಕು....

ಪರಿಸ್ಥಿತಿ

"ಹಬ್ಬ ಜೋರಾ?"

"ಏನಿಲ್ಲ..ಸಿಂಪಲ್ ಹಬ್ಬ" ನನ್ನ ಉತ್ತರ

"ಪಟಾಕಿ ಜೋರಾ?"

"ಏನಿಲ್ಲ.. ಬರೀ ಬಾಯಿ ಪಟಾಕಿ ಅಷ್ಟೇ" ನನ್ನ ಉತ್ತರ

"ಅದು ಯಾವ ಪಟಾಕಿ. ಎಷ್ಟು ರುಪಾಯಿ ಆಗತ್ತೆ ಅದಕ್ಕೆ???"

"!!@#!!!##" ನನ್ನ ಪರಿಸ್ಥಿತಿ.

~~~~~~~~~~~~~~~~~~~~~~~~~~~~~~~~~~~~~~~~~~

"ಹಬ್ಬಕ್ಕೆ ಊರಿಗೆ ಹೋಗ್ತಾಯಿದೀಯಾ?"

"ಹೂಂ. ಹೋಗ್ತಾಯಿದೀನಿ" ನನ್ನ ಉತ್ತರ

"ಬರ್ತಾ ನಮ್ಗೆಲ್ಲಾ ಏನ್ ತರ್ತೀಯಾ?"

"ಎಮ್ಮೆ ಸಗಣಿ ತರ್ತೀನಿ" ಅಂತ ತಮಾಷೆಯಿಂದ ನನ್ನ ಉತ್ತರ

"Bring 1 kg emme sagani for me" ಮಲೆಯಾಳಿ ಫ್ರೆಂಡ್ ರಿಕ್ವೆಷ್ಟು

"!!@#!!!##" ನನ್ನ ಪರಿಸ್ಥಿತಿ.

Tuesday, August 18, 2009

Tuesday, July 14, 2009

ರುದ್ರಪಾಠ

"ಅಪ್ಪ ಎಲ್ಲಿ?" ಅಂತ ಅಮ್ಮನ ಹತ್ತಿರ ಫೋನಿನಲ್ಲಿ ಕೇಳ್ದೆ.. "ಅಪ್ಪ ಸಿಗಂದೂರಿಗೆ ಹೋಯ್ದ. ದಿನಾ ಬೆಳಿಗ್ಗೆ ಅಲ್ಲಿಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ. ಸಂಜೆ ಮನೇಲಿ ಊರಿನವರಿಗೆ ರುದ್ರ ಹೇಳಿಕೊಡ್ತಾಯಿದ್ದ. ಮನ್ಯಾಥಣ್ಣ ಚದ್ರಳ್ಳಿಗೆ, ಶ್ರೀಧರಣ್ಣ ಕೆರೆಕೈ ಗೆ, ಸೂರ್ಯನಾರಾಯಣ ಚಿಕ್ಕಯ್ಯ ಗುಮ್ಗೋಡಿ ಗೆ, ದತ್ತಣ್ಣ ಮೂರ್ಕೈ ಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ." ಅಂತ ಅಮ್ಮ ಹೇಳಿದ್ಲು.

ಇದು ನಮ್ಮ ಕರೂರು ಸೀಮೆಯಲ್ಲಿ ರುದ್ರ ಕಲಿತವರು ಬೇರೆ ಬೇರೆ ಊರುಗಳಿಗೆ ಹೋಗಿ ಉಚಿತವಾಗಿ ರುದ್ರ ಹೇಳಿಕೊಡುತ್ತಿರುವ ವಿಷಯ. ನಿಮಗೆ ಆಶ್ಚರ್ಯವಾಗಬಹುದು. ಅದೂ ಉಚಿತವಾಗಿ ಹೇಳಿಕೊಡುತ್ತಿದ್ದಾರೆ ಎಂದು!!!. ಇದು ಗೋಕರ್ಣದ ಶ್ರೀಮಹಾಬಲ ದೇವರಿಗೆ ಕೋಟಿ ರುದ್ರದ ಸಂಕಲ್ಪ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಆದ ನಂತರದ ಪ್ರಭಾವ. ಇದು ಕೇವಲ ನಮ್ಮ ಸೀಮೆಯಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ಶ್ರೀರಾಮಚಂದ್ರಾಪುರ ಮಠದ ಎಲ್ಲಾ ಸೀಮೆಗಳಲ್ಲಿ ನಡೆಯುತ್ತಿರುವುದು. ಇಲ್ಲಿ ಯಾರಿಗೂ ಒತ್ತಡವಿಲ್ಲ. ಎಲ್ಲರೂ ಸ್ವಯಂ ಆಸಕ್ತಿಯಂದ ಕಲಿಯುತ್ತಿರುವುದು. ಜನರ ಮನಸ್ಸನ್ನು ಸದ್ದಿಲ್ಲದೇ/ಅರಿವಿಲ್ಲದೇ ನಮ್ಮ ಶ್ರೀಗಳವರು ಪರಿವರ್ತಿಸಿದ್ದಾರೆ ಮತ್ತು ಪರಿವರ್ತಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮನೆಯ ಒನರ್ ಶ್ರೀಧರಣ್ಣನೂ ಈಗ ರುದ್ರ ಕಲಿತಾಯಿದ್ದಾನೆ. ನಾಲ್ಕೈದು ಜನ ಇಂಜಿನಿಯರ್ಸ್ ಕಲಿಯಕೆ ಬತ್ತಾಯಿದ್ದ. ನೀನೂ ಬಾ ಅಂತ ಶ್ರೀಧರಣ್ಣ ಕರೆದಿದ್ದರು. ಬೆಳೆಗ್ಗೆ ೭ ಕ್ಕೆ ಮನೆ ಬಿಟ್ಟರೆ ರಾತ್ರಿ ಎಷ್ಟು ಹೊತ್ತಿಗೆ ವಾಪಾಸು ಬರ್ತೀನಿ ಅಂತ ನನಗೇ ಗೊತ್ತಿರೋದಿಲ್ಲ. ಸಾಫ್ಟ್ವೇರ್ ಕೆಲ್ಸನೇ ಹಾಗೆ. "ರೀ.. ಎಷ್ಟೋತ್ತಿಗೆ ಬತ್ತಿ" ಅಂತ ಹೆಂಡ್ತಿ ಕೇಳಿದ್ರೆ ಎಷ್ಟು ಹೊತ್ತು ಆಗತ್ತೇ ಅಂತಾನೇ ನನಗೆ ಗೊತ್ತಿರೋದಿಲ್ಲ. ಕಲಿಯ ಬೇಕು ಅನ್ನೋ ಮನಸ್ಸಿದೆ.. ಆದ್ರೆ ಸಮಯ ಇಲ್ಲ.

ಇನ್ನೂ ನೆನಪಿದೆ ನನಗೆ. ಸಣ್ಣವನಿದ್ದಾಗ ಬೆಳಿಗ್ಗೆ ಐದಕ್ಕೆ ಸ್ವರ ಬದ್ದಾವಾಗಿ ಕಿವಿಗೆ ನಾದವಾಗಿ ಹೊಮ್ಮುತ್ತಿದ್ದ ರುದ್ರದ ಸಾಲುಗಳು.. ಶೀ ಸೂಕ್ತ, ಪುರುಷ ಸೂಕ್ತ....

ಮಳೆಯಿರಲಿ, ಚಳಿಯಿರಲಿ, ಸೆಖೆಯಿರಲಿ ಅಪ್ಪ ದಿನ ಬೆಳಿಗ್ಗೆ ನಾಲ್ಕುವರೆಗೆ ಎದ್ದು ಸ್ನಾನ ಮಾಡಿ ಬರೋಬ್ಬರಿ ಎರಡು ತಾಸು ಪೂಜೆ ಮಾಡುತ್ತಿದ್ದರು. ಅಪ್ಪನ ಕಂಠನೇ ಹಾಗೆ. ಎಷ್ಟೇ ನಿದ್ರೆ ಬಂದಿದ್ದರು ಆ ಸ್ವರ, ಮಂತ್ರ, ಘಂಟೆ ಎಲ್ಲಾ ಈಗಲೂ ನೆನಪಿದೆ. ಅಪ್ಪನ ಜೊತೆಗೆ ಅಮ್ಮ ಎದ್ದು ಚಿಮಣಿ ಹಿಡಿದುಕೊಂಡು ದೇವರಿಗೆ ಹೂವು ಕೊಯ್ಯುತ್ತಿದ್ದು, ಸೋಮಾರಿ ನಾನು ಇನ್ನು ಮಲಗಿರುತ್ತಿದ್ದು ಎಲ್ಲವೂ ಮರೆಯಲಸಾದ್ಯ. ಈಗಲೂ ನನಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ ನೆನಪಿಲ್ಲದಿದ್ದರೂ ಆ ಲಯಬದ್ದವಾದ ಸ್ವರ ಇನ್ನೂ ನೆನಪಿದೆ.

ಅಮ್ಮ ರುದ್ರದ ಬಗ್ಗೆ ಹೇಳಿದಾದ ಬಾಲ್ಯದ ನೆನಪಾಯಿತು.

ಗಿರಿನಗರದಲ್ಲಿ ಶನಿವಾರ ಮತ್ತು ಭಾನುವಾರ ರುದ್ರ ಹೇಳಿಕೊಡುತ್ತಿದ್ದಾರಂತೆ. ಹೋಗಿ ಕಲಿಯಬೇಕು.

ಗೆಳೆಯರೊಡನೆ ರುದ್ರಪಾಠ ಲೇಖನ ಹಂಚಿಕೊಂಡಾಗ ಸಿಕ್ಕ ಕೊಂಡಿಗಳು. ಮಹೇಶ ಮತ್ತು ಉಲ್ಲಾಸರಿಗೆ ಧನ್ಯವಾದಗಳು.
http://www.sssbpt.org/sri-rudram/instructions-to-user.htm
http://www.vedamantram.com/audio/rudram.mp3

Saturday, January 24, 2009

ನೀನ್ಯಾರಿಗಾದೆಯೋ ಎಲೆ ಮಾನವ - ಜನವರಿ 2009

ಗೋವು ಮಾತನಾಡಿದಾಗ.....

ಆತ್ಮೀಯ,

ಜನ ನನ್ನನ್ನು ಅಮೃತಮಹಲ್ ಅಂತ ಗುರುತಿಸುತ್ತಾರೆ. ನಾನು ಕೆಲಸಗಾರ ತಳಿಗೆ ಸೇರಿದವ. ನಾನು ಮೂಲತಃ ಚಿಕ್ಕಮಗಳೂರು, ಹಾಸನ ಮತ್ತು ಚಿತ್ರದುರ್ಗದವ. ಮೈಸೂರು ಅರಸರು ನನ್ನನ್ನು ಅಭಿವೃದ್ಧಿಗೊಳಿಸಿದರು. ಆಗ ನನ್ನನ್ನು “ಬೆಣ್ಣೆ ಚಾವಡಿ” ಎಂಬ ಹೆಸರಿಂದ ಕರೆಯುತ್ತಿದ್ದರು. ಅನಂತರ ನನ್ನನ್ನು ಟಿಪ್ಪುಸುಲ್ತಾನ್ ಅಭಿವೃದ್ಧಿಪಡಿಸಿ “ಅಮೃತಮಹಲ್” ಅಂತ ಹೆಸರಿಟ್ಟ. ಮೈಸೂರಿನ ದಿವಾನರಾಗಿದ್ದ ಶ್ರೀಪೂರ್ಣಯ್ಯನವರು ನನ್ನನ್ನು ತಮಿಳುನಾಡಿನಲ್ಲಿ ಬೆಳೆಸಿದರು. ನನ್ನನ್ನು ತಮಿಳುನಾಡಿನ ಕೆಲವು ಕಡೆ ಇಂದಿಗೂ “ಪೂರ್ಣಯ್ಯನ ದನ” ಅಂತ ಕರೀತಾರೆ. ನಿಮ್ಮ ರೀತಿ ನನಗಿಷ್ಟವಾದ ಹೆಸರು ಇಟ್ಟುಕೊಳ್ಳುವ ಅರ್ಹತೆ ನನಗಿಲ್ಲ ಅಲ್ಲವೇ? ಹೆಸರು ಬದಲಾದರೇನಂತೆ, ನನ್ನ ವರ್ತನೆ ಬದಲಾಗಿಲ್ಲ. ನಾನೊಬ್ಬ ಸ್ವಾಮಿನಿಷ್ಟ ಮತ್ತು ಧೈರ್ಯಶಾಲಿ.

ಅದಕ್ಕಾಗಿಯೇ ನನ್ನನ್ನು ಯುದ್ಧದಲ್ಲಿ ಬಳಸುತ್ತಿದ್ದರೂ ಅನ್ಸುತ್ತೆ. ನನ್ನ ಕೋಡು ಉದ್ದವಿದೆ ಎಂದು ಅದಕ್ಕೆ ಬೆಂಕಿ ಹಚ್ಚಿ ವೈರಿಗಳತ್ತ ನನ್ನ ಓಡಿಸುತ್ತಿದ್ದರು. ಪರಿಸ್ಥಿತಿಯ ಅರಿವಿದ್ದರೂ ನಾನೊಬ್ಬ ಅಸಹಾಯಕ ನೋಡಿ. ಎಷ್ಟಾದರೂ ನಾನೊಬ್ಬ ಮೂಕ ಪ್ರಾಣಿ ಅಲ್ಲವೇ? ನನ್ನ ಕೂಗು ಅವರಿಗೆಲ್ಲಿ ಅರ್ಥವಾಗಬೇಕು ಹೇಳಿ. ಯುದ್ಧಕಾಲದಲ್ಲಿ ಸಾಮಾನು - ಸರಂಜಾಮು ಸಾಗಿಸಲು ನನ್ನನ್ನು ಉಪಯೋಗಿಸುತ್ತಿದ್ದರು. ದಿನಗಟ್ಟಲೇ ಆಹಾರ ಮತ್ತು ನೀರನ್ನು ಸೇವಿಸದೇ ನಾನಿರುತ್ತೇನೆ. ನಾನು ಹಾಲು ಜಾಸ್ತಿ ನೀಡದಿದ್ದರೂ ಶ್ರಮದ ಕೆಲಸಕ್ಕೆ ಉಪಯೋಗವಾಗುತ್ತೇನೆ.

ಹಿಂದೆ ನನ್ನ ಸಂವರ್ಧನೆಗಾಗಿ ಕಾವಲು ಭೂಮಿಯನ್ನು ಬಿಟ್ಟಿದ್ದರು. ಇತ್ತೀಚಿನ ಕೆಲವು ಘಟನೆಯಿಂದ ನನ್ನ ಹೆಸರು ಸ್ವಲ್ಪಮಟ್ಟಿಗೆ ನಿನಗೆ ಪರಿಚಯವಾಗಿರಬಹುದು. ನನ್ನ ನಿರ್ವಹಣೆಯನ್ನು ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸುವುದರಲ್ಲಿತ್ತು. ಅದರ ವಿರುದ್ಧ ನಿನ್ನ ಸಹೋದರರು ಕೂಗಾಡಿದರು, ಪ್ರತಿಭಟಿಸಿದರು. ಅದರ ಫಲವೇನಾಯಿತು? ಅಂತ ನಿನಗೆ ತಿಳಿದಿರಬಹುದು.

ಈಗ ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ನಾನು ಬಲಿಪಶುವಾದೆ.

ಹೇಳು ಮಾನವ ಇದು ನ್ಯಾಯವೇ.....
ಪ್ರತಿಭಟಿಸಲು ನಾನು ಅಸಹಾಯಕ. ನೀನೂ.....??


~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"
ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "
ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ.
ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು

Friday, January 16, 2009

ಶ್ರೀಭಾರತೀಗುರುಕುಲಮ್

ಶ್ರೀರಾಮಚಂದ್ರಾಪುರ ಮಠದ ಗುರುಕುಲ "ಶ್ರೀಭಾರತೀಗುರುಕುಲಮ್" ವೆಬ್ ಸೈಟ್ ಅಂತರಜಾಲದಲ್ಲಿ ಲಭ್ಯ.



ಇದು ಮಠಕ್ಕೆ ಸೇವಾರೂಪದಲ್ಲಿ ಮಾಡಿದ ನಾಲ್ಕನೇ ವೆಬ್ ಸೈಟ್. ಗುರುಕುಲದ ವೆಬ್ ಸೈಟ್ ಡಿಸೈನಿನ್ನಲ್ಲಿ ಮಡದಿ ಜಯಶ್ರೀಯ ಪಾತ್ರ ಹೆಚ್ಚಿತ್ತು.
1) http://shrigurukulam.org/
2) http://dharmabharathi.org
3) http://vishwagou.org/
4) http://bharathividyalaya.in/

ನಿಮ್ಮ ಸಲಹೆಗಳಿಗೆ ಸ್ವಾಗತ.