Monday, October 6, 2008

ಗಣೇಶ ಮತ್ತು ಗಣೇಶ


ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ಇಲ್ಲಿಯ ಜನರು ಆಚರಿಸೋ ಹಬ್ಬ, ರೀತಿ ನೀತಿ ನೋಡಿ ಆಶ್ಚರ್ಯ ಆಗ್ತಾಯಿತ್ತು. ಅಲ್ಲಿಯ ತನಕ ಹೆಸರೇ ಕೇಳದ ದೇವರುಗಳು ಮತ್ತು ಜನರ ಆಚಾರ ವಿಚಾರ ವಿಚಿತ್ರ ಅನ್ನಿಸುತ್ತಿತ್ತು. ಅಣ್ಣಮ್ಮ, ಕೆಂಪಮ್ಮ, ಮಾರಮ್ಮ ಮುಂತಾದ ದೇವರುಗಳ ಹೆಸರನ್ನು ನಾನು ಮೊದಲು ಕೇಳಿರಲಿಲ್ಲ. ಗಣಪತಿ, ವಿಷ್ಣು, ಶಿವ ಮುಂತಾದ ಹೆಸರು ಗೊತ್ತಿತ್ತು. ಹಾಗೆ ಜನರು ಮಾಡುವ ಪೂಜೆಗಳು ಸಹ ವಿಚಿತ್ರ ಅನ್ನಿಸುತ್ತಿತ್ತು.

ಜನರು ತಮಗೆ ಬಿಡುವಾದಾಗ ಹಬ್ಬ ಆಚರಿಸುತ್ತಿದ್ದರು. ಅದರಲ್ಲಿ ಗಣೇಶ ಹಬ್ಬನೂ ಒಂದು. ಗಣೇಶ ಇಡಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿದ್ದು ಮುಹೂರ್ತ ಅಲ್ಲ.
ದೇವ್ರು ತಾನೆ, ಎಲ್ಲಾ ಅಡ್ಜೆಸ್ಟು ಮಾಡ್ಕೋತಾನೆ ಎಲ್ಲರ ಮನಸ್ಸಲಿ. ಗಣೇಶ ಮುಖ್ಯ ಅಲ್ಲ. ಆರ್ಕೆಸ್ಟ್ರಾ ಮುಖ್ಯ. ಆರ್ಕೆಸ್ಟ್ರಾ ನವರು ಸಿಗೋದೇ ಕಷ್ಟ. ಅವರು ಸಿಕ್ಕಿದ ಮೇಲೆ ದಿನ ನಿಗದಿಯಾಗೋದು.

ನಾನಿದ್ದ ಹಳೆಯ ಏರಿಯಾ ರೋಡಿನಲ್ಲಿ ನಡೆಯುತ್ತಿದ್ದ ಗಣೇಶ ಹಬ್ಬ ಈಗಲೂ ನೆನಪಿದೆ. ದೇವರ ಮೂರ್ತಿಯ ಸೈಜು ಎಷ್ಟು ಹಣ ಕಲೆಕ್ಟ್ ಆಯ್ತು ಮತ್ತು ಅದ್ರಲ್ಲಿ ಆರ್ಕೆಸ್ಟ್ರಾ + ಮೈಕು + ಅದೂ ಇದೂ + ತಮ್ಮ ಖರ್ಚಿಗೆ ಎಲ್ಲಾ ಆದಮೇಲೆ ಎಷ್ಟು ಉಳಿತೂ ಅನ್ನೋದರ ಮೇಲೆ ಡಿಪೆಂಡು. ಮಾರ್ಕೇಟಿಗೆ ಹೋದ್ರಾಯ್ತು ಗಣೇಶ ಮೂರ್ತಿ ತಂದ್ರಾಯ್ತು. ಇಲ್ಲಿ ರಸ್ತೆ ಮದ್ಯ ಗುಂಡಿ ತೆಗೆದು ಪೆಂಡಾಲು ಹಾಕಿದ್ರಾಯ್ತು. ಗಣೇಶನ್ನ ಅದ್ರಲ್ಲಿ ಕೂರ್ಸಿದ್ರಾಯ್ತು. ಅಷ್ಟೆ!!!

ಆಮೇಲೆ ಶುರುವಾಗತ್ತೆ ನೋಡಿ ಅವರ ಸ್ಟೈಲುಗಳು. ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಗೆ ಇವರ ಕೈಲಿ ಮೈಕ್ ಇರತ್ತೆ. ಬಾಯಿ ಚಟ ಇರೋರೆಲ್ಲ ಇದೇ ಸಂದರ್ಭ ಅಂತ ತೀರ್ಸ್ಕೋತಾರೆ. ಅದ್ರಲ್ಲೂ ಒಬ್ಬ "ಕಲಾಭಿಮಾನಿಗಳೇ(?), ಈಗ ಮಂಗಳಾರತಿ ಟೈಮು. ಎಲ್ಲಾ ಬನ್ನಿ" ಅಂದ. ನಾನು ಇದ್ಯಾವುದೋ ಸಾಂಸ್ಕೃತಿಕ ಸಂಘದವರ ಕಾರ್ಯಕ್ರಮ ಇರ್ಬೇಕು ಅಂತ ಹೊರಗಡೆ ಹೋಗಿ ನೋಡಿದ್ರೆ ನಮ್ಮ ರೋಡಿನ ಹುಡುಗ್ರು ಇದ್ರು. ಮತ್ಯಾಕೆ ಇವರು ಕಲಾಭಿಮಾನಿಗಳು ಅಂತ ಕರದ್ರೂ ಅಂತ ತಲೆ ಕೆಡಿಸ್ಕೋಂಡೆ. ಕೊನೆಗೆ ಗೊತ್ತಾಗಿದ್ದು ಯಾರೋ ಒಬ್ಬ ಮಹಾಶಯರಿಗೆ ಮಾತಾಡೋ ಚಟ. ಅದ್ಕೆ ಎನೋ ಹೇಳಿದ್ರು. ನಾನು ಮಂಗಳಾರತಿಗೆ ಸರಿಯಾಗಿ ಹೋದೆ. ಅಲ್ಲಿ ಇದ್ದ ಭಟ್ಟರು ನೋಡಿ ಆಶ್ಚರ್ಯ ಆಯ್ತು. ಸಂಜೆ ಆದ ತಕ್ಷಣ ಗುಂಡು ಹಾಕಿ ರಸ್ತೆ ಅಳೆಯೋದೇ ಅವರ ದಿನನಿತ್ಯದ ಮುಖ್ಯ ಕೆಲಸವಾಗಿತ್ತು. ಈಗ ಪೂಜಾರಿಯಾಗಿದ್ದರು. ಅವರು ಮಾಡಿದ ಮಂಗಳಾರತಿ ಮಾತ್ರ ಇನ್ನೂ ಅದ್ಭುತ. ಒಂದು ಕೈಯಲ್ಲಿ ಆರತಿ, ಇನ್ನೊಂದರಲ್ಲಿ ಘಂಟೆ. ಒಂದು ರೌಂಡು ಆರತಿ ಏತ್ತಿ ನಿಲ್ಲಿಸಿ ಘಂಟೆ ತೂಗ್ತಾಯಿದ್ರು. ಎರಡನ್ನೂ ಒಟ್ಟಿಗೆ ಮಾಡಲು ಬರುತ್ತಿರಲಿಲ್ಲ. ಮರುದಿನ ಅವರಿಗೆ ಆರತಿಯ ಜವಾಬ್ದಾರಿ ಮಾತ್ರ. ಘಂಟೆ ಪಕ್ಕದವನ ಹತ್ತಿರ!!! ರಾತ್ರಿ ಹನ್ನೋಂದರ ತನಕ ಇವರು ಹಾಕೋ ಅಸಂಬದ್ದ ಹಾಡುಗಳು..ಅಬ್ಬಬ್ಬ...ಗಣೇಶ ಇದನ್ನೆಲ್ಲ ಹೇಗೆ ಸಹಿಸಿಕೊಳ್ತಾಯಿದ್ನೋ...ಅವನಿಗೇ ಗೊತ್ತು!!!


ಹಾಗೋ ಹೀಗೂ ಮೂರು ದಿನ ಆದಮೇಲೆ ದೇವರನ್ನು ನೀರಲ್ಲಿ ಮುಳುಗಿಸಿ ಬಂದು ಪೆಂಡಾಲನ್ನು ಕಿತ್ತು ತೆಗೆದು ತೆಗೆದ ಗುಂಡಿಯನ್ನು ಮುಚ್ಚದೇ ಇವರು ಗುಂಡು ಹಾಕಲು ಹೋಗ್ತಾಯಿದ್ದರು. ತಾವೇನೋ ಮಹತ್ಕಾರ್ಯ ಮಾಡಿದ ಹಾಗೆ ಮದ್ಯ ರಾತ್ರಿಯ ತನಕ ಇವರ ಸಮಾಲೋಚನೆ, ಕೇಕೆ ಮುಂತಾದವುಗಳು ನಡಿತಾಯಿದ್ದವು.

ಇದು ನಗರದಲ್ಲಿ ನಡೆದ ಒಂದು ಘಟನೆ. ಹಾಗಂತ ಎಲ್ಲರೂ ಈ ರೀತಿ ಮಾಡ್ತಾರೆ ಅಂತಲ್ಲ. ತುಂಬಾ ಒಳ್ಳೆಯ ಕಾರ್ಯಕ್ರಮಗಳು ನಡಿಯುತ್ತಾ ಇರತ್ತೆ. ಆದರೆ ಬಹಳಷ್ಟು ಜನ ಗಣೇಶ ಹಬ್ಬವನ್ನು ಮೋಜಿಗಾಗಿ ಆಚರಿಸುತ್ತಾರೆ.

ನಮ್ಮ ಊರಲ್ಲಿ ಗಣೇಶ ಹಬ್ಬ ಹೇಗಿರತ್ತೆ ಅಂತ ನೋಡೋಣ ಬನ್ನಿ. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ಒಂದು ಪದ್ದತಿ ಪುರಾತನದಿಂದ ನಡೆದು ಬಂದಿದೆ. ಗಣೇಶನ್ನು ಯಾರೂ ತಾವಾಗಿಯೇ ತರುವುದಿಲ್ಲ. ಯಾರಾದರು ಗಣೇಶನ ಮೂರ್ತಿಯನ್ನು ಹಬ್ಬದ ಹಿಂದಿನ ದಿನ ರಾತ್ರಿ ಮನೆಯ ಮುಂದೆ ತಂದಿಟ್ಟರೆ ಆ ಮನೆಯವರು ತಮ ಶಕ್ತಿಗನುಸಾರವಾದಷ್ಟು ವರ್ಷ ಗಣೇಶನ ಪೂಜೆ ಮಾಡುತ್ತಾರೆ. ಹಾಗೆ ತಂದು ಇಡುವಾಗ ಮನೆಯವರು ಯಾರು ಎದಿರುಗಡೆ ಬರಬಾರದು ಅನ್ನೋ ನಿಯಮ ಇದೆಯಂತೆ. ಮನೆಯಲಿ ಯಾರದರು ತಂದು ಇಟ್ಟರೆ ಕನಿಷ್ಟ ಮೂರು ವರ್ಷ ಗಣೇಶನ್ನು ತರಬೇಕು ಅನ್ನೋ ನಿಯಮವಿದೆ ಅನ್ನುತ್ತಾರೆ. ಮನಸ್ಸಿಗೆ ಬಂದ ದಿನ ಗಣೇಶನನ್ನು ಇಡೋದಿಲ್ಲ. ಹಬ್ಬದ ದಿನದಂದೇ ಇಡುತ್ತಾರೆ. ಕೆಲವರು ಅಂದೇ ಮೂರ್ತಿಯನ್ನು ವಿಸರ್ಜಿಸಿದರೇ, ಇನ್ನು ಕೆಲವರು ಮೂರು ದಿನವಾದ ಮೇಲೆ ವಿಸರ್ಜಿಸುತ್ತಾರೆ. ತಂದ ಗಣೇಶನ ವಿಗ್ರಹಕ್ಕೆ ಮೊದಲು ಪ್ರಾಣ ಪ್ರತಿಷ್ಟೆ ಮಾಡುತ್ತಾರೆ. ಪ್ರಾಣ ಪ್ರತಿಷ್ಟೆ ಎಂದರೆ ಮೂರ್ತಿಗೆ ದೇವರನ್ನು ಆಹ್ವಾನಿಸುವುದು ಅಂತ ಅರ್ಥ. ಅದಕ್ಕೆ ಕೆಲವು ಪೂಜೆಗಳಿವೆ. ನನಗೆ ಅದರ ಬಗ್ಗೆ ಅಷ್ಟು ಮಾಹಿತಿಯಿಲ್ಲ. ಹೀಗೆ ಒಂದು ಕ್ರಮಬದ್ದವಾಗಿ ಆಚರಿಸುತ್ತಾರೆ.

ಈಗ ಪ್ರವೇಶವಾಗುತ್ತಿರುವವನು ನಮ್ಮ ಕಥಾನಾಯಕ ಗಣೇಶ ಶೆಟ್ಟಿ. ಗಣೇಶ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದವನು. ಹೊಟ್ಟೆ ಪಾಡಿಗಾಗಿ ನಮ್ಮ ಊರಿಗೆ ತನ್ನ ಸಂಸಾರದ ಜೊತೆ ಬಂದು ಕೂಲಿ ಕೆಲಸ ಮಾಡುತ್ತಿದ್ದವನು ಕ್ರಮೇಣ ಜನರಲ್ಲಿ ವಿಶ್ವಾಸ ಗಳಿಸಿ ತನ್ನೂರಿನ ಕೆಲವರನ್ನು ಕರೆತಂದು ಇಲ್ಲಿ ಕೆಲಸವನ್ನು ಗುತ್ತಿಗೆಗೆ ಹಿಡಿದು ಮೇಸ್ತ್ರಿಯಾಗಿ ಬಡ್ತಿ ಹೊಂದಿದ್ದ. ಮಸ್ತುಕಟ್ತಾದ ಶರೀರ, ಆರು ಅಡಿ ಎತ್ತರದ ಗಣೇಶ ಶೆಟ್ಟಿ ಸುಮಾರು ನಲವತ್ತರ ಆಜುಬಾಜಿನವನು. ಹೆಚ್ಚಾಗಿ ಆತ ಉಡುತ್ತಿದ್ದು ತುಂಡು ಬಟ್ಟೆ. ಅದು ಅವನ ಕೆಲಸಕ್ಕೆ ಅನುಕೂಲವಾಗುತ್ತಿತ್ತು ಅನ್ಸತ್ತೆ. ಕೆಲಸದ ಮದ್ಯೆ ಬೀಡಿ ಸೇದೊದು ಅವನ ಅಭ್ಯಾಸ.

ಸುಮಾರು ಹದಿನೈದು ವರ್ಷಗಳ ಹಿಂದೆ ಗಣೇಶ ಹಬ್ಬದ ಸಮಯದಲ್ಲಿ ಆತ ಕೆಲಸ ಮಾಡುತ್ತಿದ್ದಿದ್ದು ನಮ್ಮೂರಿನ ಹೆಗಡೆಯವರ ಮನೆಯಲ್ಲಿ. ಹಬ್ಬ ಹತ್ತಿರವಾಗುತ್ತಿದ್ದ ಹಾಗೆ ಹೆಗಡೆಯವರಿಗೆ ಒಬ್ಬ ಕೆಲಸದವನು ಒಂದು ಕುತೂಹಲ ಸುದ್ದಿ ತರ್ತಾನೆ. ನಿಮ್ಮ ಮನೆಗೆ ಊರಿನ ಒಂದಿಷ್ಟು ಹುಡುಗರು ಗಣೇಶನ್ನು ತಂದು ಇಡುತ್ತಾರೆ ಅಂತ. ವಿಷಯ ಕೇಳಿದ ಗಣೇಶ ಶೆಟ್ಟಿ "ಹೆಗ್ಡೇರರೇ, ಯಾರು ಬತ್ರೋ ಕಾಣ್ತೇ, ಅವತ್ತು ರಾತ್ರಿ ನಾನು ನಿಮ್ಮ ಮನೆ ಹೊರಗೆ ಮಲಗ್ತೆ" ಅಂತ ಹೇಳಿದ್ದ. ಹೆಗಡೆಯವರು ಸುಮ್ಮನಿದ್ದರು.

ಅವತ್ತು ಆತ ಮೊದಲೇ ಹೇಳಿದಂತೆ ಹೆಗಡೆಯವರ ಮನೆಯ ಹೊರಗೆ ಮಲಗಿದ್ದ. ಮದ್ಯರಾತ್ರಿಯ ಸಮಯ, ಊರಿನ ಐದು ಹುಡುಗರು ಗಣೇಶನನ್ನು ತೆಗೆದುಕೊಂಡು ಹೆಗಡೆಯವರ ಮನೆಯತ್ತ ಹೊರಟರು. ಅವರಿಗೆ ಗಣೇಶ ಶೆಟ್ಟಿಯ ಬಗ್ಗೆ ಅರಿವಿರಲಿಲ್ಲ. ಎಲ್ಲರ ಮನಸ್ಸಲಿ ಎನೋ ಒಂದು ರೀತಿಯ ಪುಳಕ. ಇಬ್ಬರು ದಾರಿ ಕಾಣಲೆಂದು ದಂದಿ ತಂದಿದ್ದರು. ಹೆಗಡೆಯವರ ಮನೆಯ ಅಂಗಳಕ್ಕೆ ಬಂದಾಗ ಅವರಿಗೆ ಗಣೇಶ ಶೆಟ್ಟಿ ಹೊರಗಡೆ ಮಲಗಿದ್ದಿದ್ದು ಕಾಣಿಸುತ್ತದೆ. ಒಬ್ಬ ಸುಮ್ಮನೆ ಹತ್ತಿರ ಬಂದು ನೋಡಿದಾಗ ಗಣೇಶ ಶೆಟ್ಟಿ ಈ ಲೋಕದಲ್ಲಿ ಇರಲಿಲ್ಲ. ಗಾಡ ನಿದ್ರೆಯಲಿದ್ದ. ಆತನ ಗೊರಕೆಯ ಸದ್ದು ದೊರದಲ್ಲಿ ನಿಂತಿದ್ದವರಿಗೆ ಕೇಳಿಸುತ್ತಿತ್ತು. ಬಂದವನು ಗಣೇಶ ಶೆಟ್ಟಿಯ ಪರಿಸ್ಥಿತಿಯನ್ನು ಗಮನಿಸಿ ಅವನಿಂದ ತಮಗೇನು ಅಪಾಯವಿಲ್ಲವೆಂದರಿತು ಎಲ್ಲರಿಗೂ ವಿಷಯ ತಿಳಿಸಿದ. ಎಲ್ಲರೂ ಒಳಗೆ ಬಂದು ಮನೆಯ ಬಾಗಿಲಲ್ಲಿ ಗಣೇಶನ್ನು ಇಟ್ಟು, ಆತನಿಗೆ ಪೂಜೆಯನ್ನು ಮಾಡಿದರು. ಪೂಜೆ ಮಂಗಳಾರತಿಯ ತನಕ ಬಂದರೂ ಮನೆಯವರಿಗಾಗಲಿ ಅಥವಾ ಗಣೇಶ ಶೆಟ್ಟಿಗಾಗಲಿ ಇದರ ಅರಿವಿರಲಿಲ್ಲ. ಮಂಗಳಾರತಿಯ ಸಮಯದಲ್ಲಿ ಜಾಂಗಟೆ ಹೊಡೆಯುವುದು ಸಾಮಾನ್ಯ. ಹಾಗೆ ಇಲ್ಲಿ ಮಂಗಳಾರತಿಯನ್ನು ಒಬ್ಬರು ಮಾಡ್ತಾಯಿದ್ದರು ಇನ್ನೊಬ್ಬರು ಅಲ್ಲೇ ಹತ್ತಿರದಲ್ಲಿ ಮಲಗಿದ್ದ ಗಣೇಶ ಶೆಟ್ಟಿಯ ಕಿವಿಯ ಹತ್ತಿರ ಜಾಂಗಟೆಯನ್ನು ಜೋರಾಗಿ ಬಡಿದರು. ಪಕ್ಕದಲ್ಲಿದ್ದವರು ಪಟಾಕಿಯನ್ನು ಅದೇ ಸಮಯದಲ್ಲಿ ಹೊಡೆದರು. ಗಾಡ ನಿದ್ರೆಯಲ್ಲಿದ್ದ ಗಣೇಶ ಶೆಟ್ಟಿಗೆ ಏನಾಗುತ್ತಿದೆ ಅನ್ನುವುದು ತಿಳಿಯಲಿಲ್ಲ. ದಿಗ್ಗನೆ ಎದ್ದು ಕುಳಿತಿದ್ದವನನು ನೋಡಿದ ಎಲ್ಲರೂ ಗೊಳ್ಳೆಂದು ನಗಲು ಪ್ರಾರಂಭಿಸಿದರು. ಗಣೇಶನಿಗೆ ಯಾರೋ ಕಳ್ಳರು ಬಂದಿದಾರೆ ಅಂತ ಯೋಚಿಸಿದವನೇ ಪಕ್ಕದಲ್ಲಿ ಇದ್ದ ಕತ್ತಿಯನ್ನು ಎತ್ತಿ ಇವರ ಮೇಲೆರಗಿದ. ಸುಮ್ಮನೆ ತಮಾಷೆಗೆ ಮಾಡ್ತಾಯಿದ್ದಾನೆ ಅಂತ ಎಲ್ಲ ಭಾವಿಸಿದರು. ಆದರೆ ಗಣೇಶ ಅಲ್ಲೇ ಇದ್ದವನ ಕೊರಳಿಗೆ ಕೈ ಹಾಕಿದ್ದನ್ನು ನೋಡಿ, ಇವನು ಕೊಲೆ ಮಾಡಬಹುದೆಂದು ಹೆದರಿ ಗಣೇಶ ಶೆಟ್ಟಿಯನ್ನು ಎಲ್ಲ ತಳ್ಳಿ ಚಪ್ಪಲಿಯನ್ನು ಹಾಕಿ ಕೊಳ್ಳದೇ ದಿಕ್ಕಾಪಾಲಾಗಿ ಓಡಿದರು. ಗಣೇಶ ಶೆಟ್ಟಿ ಹಿಂದಿನಿಂದ ಆಟ್ಟಿಸಿಕೊಂಡು ಬರುತ್ತಿದ್ದ. ಬಂದವರೆಲ್ಲಾ ರಸ್ತೆ ಬಿಟ್ಟು ಗುಡ್ಡ ಹತ್ತಿ ಹಾಗೋ ಹೀಗೋ ಮನೆ ಸೇರಿದರು. ಮೈಯೆಲ್ಲ ಗಾಯವಾಗಿತ್ತು. ಅರ್ದ ಘಂಟೆಯ ಹಿಂದಿದ್ದ ಉತ್ಸಾಹವೆಲ್ಲ ಇಳಿದು ಸದ್ಯ ಬದುಕಿ ಉಳಿದೆವೆಲ್ಲ ಅಂತ ತಮಗೆ ತಾವೇ ಸಮಾಧಾನ ಹೇಳಿಕೊಂಡರು. ಗಣೇಶ ಶೆಟ್ಟಿ ಎಲ್ಲರನ್ನೂ ಮನಸಾರೆ ಬೈಯುತ್ತಾ ಹೆಗಡೆಯವರ ಮನೆಗೆ ವಾಪಾಸಾದ. ಸದ್ದು ಕೇಳಿದ ಹೆಗಡೆಯವರ ಮನೆಯವರೆಲ್ಲಾ ಮನೆಯ ಹೊರಗೆ ಬಂದಾಗ ಅವರಿಗೆ ಕಂಡಿದ್ದು ಪೂಜೆ ಮಾಡಿಸಿಕೊಂಡಿದ್ದ ಗಣೇಶ ಮೂರ್ತಿ ಮತ್ತು ಇಡಲು ಬಂದವರಿಗೆ ಪೂಜೆ ಮಾಡಲು ಹೋಗಿ ಅವರು ಸಿಗದೇ ವಾಪಸು ಬಂದು ಎನಾಗಿದೆ ಎಂಬ ಅರಿವಿಲ್ಲದ ಗಣೇಶ ಶೆಟ್ಟಿ.

ಹೆಗಡೆಯವರ ಮನೆಯ ಬಾಗಿಲಲ್ಲಿ ಇದ್ದ ಗಣಪ ಎಲ್ಲರನ್ನು ನೋಡಿ ತನ್ನಷ್ಟಕ್ಕೆ ಮನಸಲ್ಲಿ ನಗುತ್ತಿದ್ದ.

5 comments:

Shree said...

tumba channaagi mudi bandide.

ವಿ.ರಾ.ಹೆ. said...

ಮಸ್ತಿದ್ದು ಗಣೇಶನ ಕಥೆ

shivu.k said...

ಮೊದಲನೆ ಕಥೆ ಥೇಟ್ ನಾನು ಇರುವ ಬಡಾವಣೆಯ ಕತೆ. ನಿಮಲ್ಲಿ ಕೆಲವು ದಿನವಾದರೆ ನಮ್ಮ ಬಡಾವಣೆಯಲ್ಲಿ ಡಿಸೆಂಬರವರಗೂ ಇಡುತ್ತಾರೆ. ಅವರಿಗೆ ರಾಜಕೀಯದವರು ದುಡ್ಡು ಕೊಡಬೇಕು, ಆರ್ಕೇಷ್ಟ್ರದವರು ಸಿಗಬೇಕು ಆಷ್ಟೇ. ಉಳಿದಿದ್ದೆಲ್ಲಾ ನಿಮ್ಮ ಕತೆ ಇದ್ದಂಗೆ.
ಎರಡನೇ ಕತೆ ಆಸಕ್ತಿದಾಯಕವಾಗಿದೆ. ಚೆನ್ನಾಗಿದೆ.
ನಾನು ದಿನಾ ಬರ್ತೇನೆ. ನೀವು ಬನ್ನಿ ನನ್ನ ಬ್ಲಾಗಿಗೆ. ಹೀಗೆ ಹೊಸದನ್ನು ಕೊಟ್ಟು ತಗೊಳ್ಳೋಣ.

ಶಿವು.ಕೆ.

Madhooo said...

Bengalurina ganesha habbada ondu irritating thing andre yella tarada songs loudspeakernalli haakodu. Spirituality would run away when songs like "olage seridare gundu" are played for ganesha chaturthi.:)

ಯಜ್ಞೇಶ್ (yajnesh) said...

@ ಶ್ರೀ, @ ವಿಕಾಸ ಧನ್ಯವಾದಗಳು

@ಶಿವು, ಇದು ಎಲ್ಲ ಬಡಾವಣೆಗಳ ಸಮಸ್ಯೆ!!! ಪ್ರತಿಕ್ರಿಯೆಗೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ. ನಾನು ನಿಮ್ಮ ಬ್ಲಾಗನ್ನು ಒದುತ್ತಿರುತ್ತೇನೆ.

@Madhu,

Welcome back. I too agree with your comments...